ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ
ಬಿಜೆಪಿ ಈ ಬಾರಿಯ ಹಿಮಾಚಲ ಪ್ರದೇಶ ಚುನಾವಣೆಯನ್ನು ಸಂಪ್ರದಾಯ ಬದಲಾಗುತ್ತಿದೆ (ರಿವಾಜು ಬದಲಾವಣೆಯಾಗುತ್ತಿದೆ) ಎಂಬ ಘೋಷ ವಾಕ್ಯದಲ್ಲಿ ಎದುರಿಸಿತ್ತು. ಆದರೆ ಅದು ಘೋಷ ವಾಕ್ಯಕ್ಕೆ ಅಷ್ಟೇ ಸೀಮಿತವಾಗಿ ಕಾಂಗ್ರೆಸ್ 5 ವರ್ಷಗಳ ನಂತರ ಅಧಿಕಾರಕ್ಕೇರುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯನ್ನು ಕೈ ಹಿಡಿಯದ, ಕೈಗೆ ಅಧಿಕಾರ ನೀಡಿದ ಅಂಶಗಳು ಇವು...
- ಬಿಜೆಪಿ ಈ ಬಾರಿ ರಾಜ್ಯದಲ್ಲಿ ಚುನಾವಣೆಯನ್ನು ಪ್ರಧಾನಿ ಮೋದಿ ಕೇಂದ್ರಿತವನ್ನಾಗಿಸಿತ್ತು. ಬಿಜೆಪಿಗೆ ನೀಡುವ ಪ್ರತಿ ಮತ ಮೋದಿಗೇ ಸೇರುತ್ತದೆ ಎಂಬುದು ಚುನಾವಣೆಯಲ್ಲಿ ಬಿಜೆಪಿ ಬಳಸಿದ ಅಸ್ತ್ರವಾಗಿತ್ತು.
- ಮತ್ತೊಂದು ಪ್ರಮುಖ ಅಂಶವೆಂದರೆ 1985 ರ ನಂತರ ಹಿಮಾಚಲ ಪ್ರದೇಶದಲ್ಲಿ ಯಾವುದೇ ಪಕ್ಷ ಸತತ 2 ನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ.
- ನಿರುದ್ಯೋಗ ಸಮಸ್ಯೆ: ಈ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಎದುರಿಸುವುದಕ್ಕೆ ನಿರುದ್ಯೋಗ ಸಹ ಪ್ರಮುಖ ಅಂಶವಾಗಿತ್ತು. ಅಕ್ಟೋಬರ್ ವೇಳೆಗೆ ನಿರುದ್ಯೋಗ ಸಮಸ್ಯೆ ಶೇ.8.6 ರಷ್ಟಿತ್ತು. ಹಾಗೂ ಈ ಅಂಕಿ-ಅಂಶ ದೇಶದ ಸರಾಸರಿಗಿಂತಲೂ ಹೆಚ್ಚಾಗಿತ್ತು.
- ಬಿಜೆಪಿಯ ಅಧಿಕಾರದ ಕನಸನ್ನು ಸುಟ್ಟ ಅಗ್ನಿಪಥ ಯೋಜನೆ: ಅತಿ ಹೆಚ್ಚು ಪರಮವೀರ ಚಕ್ರ ಪದಕ ಯೋಧರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿರುವ ಹಿಮಾಚಲ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಬಹಳ ವಿರೋಧ ಎದುರಿಸಿತ್ತು.
ಕಾಂಗ್ರೆಸ್ ಗೆ ಸಕಾರಾತ್ಮಕವಾದ ಅಂಶಗಳು
- ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಭರವಸೆ ನೀಡಿತ್ತು.
- ಸೆಬು ಬೆಳೆಗಾರರ ಆಕ್ರೋಶ, ಬಿಜೆಪಿಯ ಬಂಡಾಯ, ಚುನಾವಣೆ ಎದುರಿಸಲು 21 ಮಂದಿ ಹೊರಬಂದಿದ್ದೂ ಆಡಳಿತ ಪಕ್ಷಕ್ಕೆ ಮುಳುವಾಯಿತು.
- ಇನ್ನು ಬುಡಕಟ್ಟು ಪ್ರದೇಶಗಳಲ್ಲಿ ಪರಿಸರ ವಿಷಯಗಳು ಹೆಚ್ಚು ಪ್ರಬಲವಾಗಿ ಕೆಲಸ ಮಾಡಿದ್ದು, ಲಾಹೌಲ್ ಮತ್ತು ಸ್ಪಿತಿ ಮತ್ತು ಕಿನ್ನೌರ್ ಗಳಲ್ಲಿ ಹೊಸ ಜಲವಿದ್ಯುತ್ ಯೋಜನೆಗಳು ಮತ್ತು ಅರಣ್ಯ ಹಕ್ಕುಗಳ ಕಾಯಿದೆ (ಎಫ್ಆರ್ಎ) ಅನುಷ್ಠಾನದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಮತದಾರರನ್ನು ಕೇಳಿಕೊಳ್ಳುತ್ತಿದ್ದರು.
- ಬುಡಕಟ್ಟು ಜಿಲ್ಲೆಗಳಲ್ಲಿ ಹೊಸ ಜಲವಿದ್ಯುತ್ ಯೋಜನೆಗಳ ವಿರುದ್ಧ ನೋ ಎಂದರೆ ನೋ ಎಂಬ ಅಭಿಯಾನ ನಡೆದಿದ್ದವು. ಬಿಜೆಪಿ ವಿರುದ್ಧ ಜನರ ಅಭಿಪ್ರಾಯ ಒಗ್ಗೂಡುವುದಕ್ಕೆ ಇದೂ ಒಂದು ಕಾರಣವಾಗಿದೆ.
- ಇದರೊಂದಿಗೆ ಬೆಲೆ ಏರಿಕೆಯಿಂದಲೂ ರೋಸಿ ಹೋಗಿದ್ದ ಜನತೆ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos