ದೇಶ

ಬೇರೆ ಜಾತಿಯ ಯುವತಿಯೊಂದಿಗೆ ಮಗನ ವಿವಾಹಕ್ಕೆ ಸಿದ್ಧತೆ: ಜಾರ್ಖಂಡ್ ಕಾರ್ಮಿಕ ಸಚಿವಗೆ ಬುಡಕಟ್ಟು ಸಮುದಾಯ ಬಹಿಷ್ಕಾರ!

Sumana Upadhyaya

ರಾಂಚಿ: ಜಾರ್ಖಂಡ್ ರಾಜ್ಯದ ಕಾರ್ಮಿಕ ಸಚಿವ ಹಾಗೂ ಛತ್ರ ಕ್ಷೇತ್ರದ ಶಾಸಕ ಸತ್ಯಾನಂದ್ ಭೋಕ್ತಾ ಅವರನ್ನು ಅವರದೇ ಸಮುದಾಯದ ಮಂದಿ ಸಾಮಾಜಿಕವಾಗಿ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ರಾಜಕೀಯ ಲಾಭಕ್ಕಾಗಿ ಸಮುದಾಯದ ಹೊರಗಿನ ಯುವತಿಯನ್ನು ಮಗನಿಗೆ ಮದುವೆ ಮಾಡಿಸಿದ್ದಾರೆ  ಎಂದು ಅವರದೇ ಸಮುದಾಯವಾದ ಖೈರ್ವಾರ್ ಭೋಕ್ತ ಸಮಾಜ ವಿಕಾಸ ಸಂಘ ಸಾಮಾಜಿಕವಾಗಿ ಬಹಿಷ್ಕರಿಸಿದೆ.

ರಾಜ್ಯದಲ್ಲಿ ಇತ್ತೀಚೆಗೆ ಗಂಜುಗಳಿಗೆ (ಭೋಕ್ತರು) ಬುಡಕಟ್ಟು ಸ್ಥಾನಮಾನವನ್ನು ನೀಡಲಾಗಿದೆ. ಆದ್ದರಿಂದ, ಸಚಿವರು ತಮ್ಮ ಪ್ರಸ್ತುತ ವಿಧಾನಸಭಾ ಕ್ಷೇತ್ರವಾದ ಛತ್ರದಿಂದ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ, ಇದು ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿದೆ. ಹೀಗಾಗಿ ತಮ್ಮ ಭದ್ರಕೋಟೆಯಾಗಿರುವ ಛತ್ರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಅವರು ಪರಿಶಿಷ್ಟ ಜಾತಿಯ ಯುವತಿಯನ್ನು ಮಗನಿಗೆ ಮದುವೆ ಮಾಡಿಸಿ ನಾಟಕವಾಡುತ್ತಿದ್ದಾರೆ ಎಂದು ಸಂಘ ಆರೋಪಿಸುತ್ತಿದೆ.

ಸಚಿವರು ಮತ್ತು ಅವರ ಕುಟುಂಬದೊಂದಿಗೆ ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳದಿರಲು ಸಮುದಾಯ ನಿರ್ಧರಿಸಿದೆ, ಅಂದರೆ ಅವರು ನಡೆಸುವ ಯಾವುದೇ ಮದುವೆ, ಸಾವು ಅಥವಾ ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಸಂಘದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಮುದಾಯದ ಮುಖಂಡರ ಪ್ರಕಾರ, ಇದು ಪ್ರೇಮ ವಿವಾಹವಾಗಿದ್ದರೆ ಅವರು ಅದನ್ನು ಒಪ್ಪಿಕೊಳ್ಳುತ್ತಿದ್ದರು, ಆದರೆ ಸಚಿವರು ಉದ್ದೇಶಪೂರ್ವಕವಾಗಿ ತಮ್ಮ ಮಗನನ್ನು ಕೆಳಜಾತಿಯ ಯುವತಿಯೊಂದಿಗೆ ರಾಜಕೀಯ ಲಾಭಕ್ಕಾಗಿ ಮದುವೆ ಮಾಡಿಸುತ್ತಿದ್ದಾರೆ, ಇದು ಸ್ವೀಕಾರಾರ್ಹವಲ್ಲ. ಬುಡಕಟ್ಟು ಸಮಾಜವು ತನ್ನದೇ ಆದ ಸಂಪ್ರದಾಯಗಳು ಮತ್ತು ವ್ಯವಸ್ಥೆಗಳನ್ನು ಹೊಂದಿರುವುದರಿಂದ ನಮ್ಮ ಸಮುದಾಯದಲ್ಲಿ ಅಂತರ್ಜಾತಿ ವಿವಾಹವನ್ನು ನಿಷೇಧಿಸಲಾಗಿದೆ, ಇದನ್ನು ಸಚಿವರು ತಮ್ಮ ರಾಜಕೀಯ ಲಾಭಕ್ಕಾಗಿ ಉಲ್ಲಂಘಿಸಿದ್ದಾರೆ, ಇದು ಸ್ವೀಕಾರಾರ್ಹವಲ್ಲ. ಹೀಗಾಗಿ ಭೋಕ್ತ ಸಮುದಾಯದ ನಿಯಮಗಳ ಅಡಿಯಲ್ಲಿ ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗಿದೆ’ ಎಂದು ಖೈರವಾರ ಭೋಕ್ತ ಸಮಾಜ ವಿಕಾಸ ಸಂಘದ ಕೇಂದ್ರ ಅಧ್ಯಕ್ಷ ದರ್ಶನ್ ಗಂಜು ಹೇಳಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾದ ಛತ್ರ ಸ್ಥಾನದ ಮೇಲೆ ಸಚಿವರು ಕಣ್ಣಿಟ್ಟಿದ್ದು, ತಮ್ಮ ಕಿರಿಯ ಮಗನನ್ನು ಎಸ್‌ಸಿ ಹುಡುಗಿಗೆ ಮದುವೆ ಮಾಡಿಕೊಡುತ್ತಿದ್ದಾರೆ ಎಂದು ಅವರು ಹೇಳಿದರು. ಸಚಿವರು ಅಧಿಕಾರದ ದುರಾಸೆಯಲ್ಲಿ ಸಮುದಾಯದ ಮಾನವನ್ನು ಹರಾಜಿಗೆ ಹಾಕುತ್ತಿದ್ದಾರೆ. ಆದ್ದರಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಿನಗೂಲಿ ನೌಕರರಾಗಲಿ, ಸಚಿವರಾಗಲಿ ಸಮುದಾಯದ ಮುಂದೆ ಎಲ್ಲರೂ ಒಂದೇ. ಯಾರೂ ಸಮುದಾಯಕ್ಕಿಂತ ಮೇಲಲ್ಲ ಎಂದು ಗಂಜು ಹೇಳಿದರು. ಈ ಹಿಂದೆಯೂ ಸಚಿವರು ಖೈರವಾರ ಭೋಕ್ತ ಸಮಾಜಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿದರು, ನಂತರ ಅವರ ಪ್ರತಿಕೃತಿಯನ್ನು ಸಮುದಾಯದವರು ದಹಿಸಿದರು ಎಂದು ಅವರು ಹೇಳಿದರು.

ಸಂಘದ ಮತ್ತೋರ್ವ ಕಾರ್ಯಕರ್ತ ಜಗದೀಶ್ ಭೋಕ್ತ ಕೂಡ ಸಚಿವರು ಮಾಡುತ್ತಿರುವುದು ತಮಗೆ ಒಪ್ಪಿಗೆಯಾಗುವುದಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT