ದೇಶ

ಹಿಮಾಚಲ ಪ್ರದೇಶ: ಮುಖ್ಯಮಂತ್ರಿ ಆಯ್ಕೆ ಕುರಿತು ಒಮ್ಮತಕ್ಕೆ ಬಾರದ ಕಾಂಗ್ರೆಸ್, ಸಿಎಂ ಸ್ಥಾನಕ್ಕಾಗಿ ತೀವ್ರ ಲಾಬಿ; ಇಲ್ಲಿದೆ ಇನ್‌ಸೈಡ್ ಸ್ಟೋರಿ

Ramyashree GN

ಶಿಮ್ಲಾ: ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪಕ್ಷದ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿರ್ಣಯವನ್ನು ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದ ಒಂದು ದಿನದ ನಂತರ ಶನಿವಾರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಲಾಬಿ ಮುಂದುವರಿದಿದೆ.

ಬೆಳಗ್ಗೆಯಿಂದಲೇ ಕಾಂಗ್ರೆಸ್ ಶಾಸಕರು ಪಕ್ಷದ ಕೇಂದ್ರ ವೀಕ್ಷಕರಾದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ತಂಗಿರುವ ಶಿಮ್ಲಾದ ಸೆಸಿಲ್ ಹೋಟೆಲ್‌ಗೆ ಭೇಟಿ ನೀಡಿದರು.

ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶದೊಂದಿಗೆ ಗೆದ್ದ ನಂತರವೂ, ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಅವರ ನಿಧನದಿಂದ ಉಂಟಾದ ಶೂನ್ಯವನ್ನು ತುಂಬಲು ಮತ್ತು ಮುಖ್ಯಮಂತ್ರಿ ಆಗುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಒಮ್ಮತಕ್ಕೆ ಬರುವುದಕ್ಕೆ ಕಾಂಗ್ರೆಸ್‌ಗೆ ಕಷ್ಟಕರವಾಗಿದೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಮತ್ತು ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ಹಲವು ನಾಯಕರು ವೀಕ್ಷಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು.

66 ವರ್ಷದ ಪ್ರತಿಭಾ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿರುವುದಾಗಿ ಸೂಚಿಸಿದ್ದು, ಇದನ್ನು ಅವರ ಪುತ್ರ ಕೂಡ ಸ್ಫಷ್ಟಪಡಿಸಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸುಖು, 'ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ, ನಾನು ಕೇವಲ ಕಾಂಗ್ರೆಸ್ ಕಾರ್ಯಕರ್ತೆ ಮತ್ತು ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ' ಎಂದು ಹೇಳಿದ್ದರು.

ಕಾಂಗ್ರೆಸ್‌ ಪಕ್ಷದ ಕೇಂದ್ರೀಯ ಚುನಾವಣಾ ವೀಕ್ಷಕರು ಹಾಗೂ ಎಐಸಿಸಿ ಉಸ್ತುವಾರಿ ರಾಜೀವ್‌ ಶುಕ್ಲಾ ಅವರನ್ನೊಳಗೊಂಡ ನಿಯೋಗವು ಶುಕ್ರವಾರ ರಾತ್ರಿ ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್‌ ಅರಳೇಕರ್‌ ಅವರನ್ನು ಭೇಟಿ ಮಾಡಿತು. ರಾಜ್ಯಪಾಲರಿಗೆ ಪಕ್ಷದ ಚುನಾಯಿತ ಶಾಸಕರ ಪಟ್ಟಿ ಸಲ್ಲಿಸಿದ ನಿಯೋಗವು, ಸರ್ಕಾರ ರಚನೆಗೆ ಕಾಲಾವಕಾಶ ಕೋರಿದೆ.

68 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿದೆ. ನವೆಂಬರ್ 12 ರಂದು ಮತದಾನ ನಡೆದಿದ್ದು, ಗುರುವಾರ (ಡಿ.8) ಫಲಿತಾಂಶ ಪ್ರಕಟವಾಗಿದೆ.

SCROLL FOR NEXT