ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ಮತ್ತೆ ಸಂಘರ್ಷ ಏರ್ಪಟ್ಟಿದ್ದು, ಉಭಯ ದೇಶಗಳ ನಡುವಿನ ಸೈನಿಕರು ಸಂಘರ್ಷಕ್ಕಿಳಿದ ಪರಿಣಾಮ ಎರಡೂ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ.
ಸೇನಾ ಮೂಲಗಳ ಪ್ರಕಾರ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವ ಗಡಿ ರೇಖೆ (LAC) ಬಳಿ ಬಂದಿದ್ದ ಚೀನಾದ ಸೈನಿಕರಿಗೆ ಭಾರತೀಯ ಯೋಧರು ಪ್ರತಿರೋಧ ತೋರಿದ್ದು, ಈ ವೇಳೆ ಎರಡೂ ಕಡೆಯವರ ನಡುವೆ ಸಂಘರ್ಷ ಏರ್ಪಟ್ಟು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಮೊನ್ನೆ ಡಿಸೆಂಬರ್ 9ರಂದು ಈ ಕಾದಾಟ ನಡೆದಿದ್ದು, ತಡವಾಗಿ ಈ ಬೆಳಕಿಗೆ ಬಂದಿದೆ. ಘರ್ಷಣೆಯಲ್ಲಿ ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಗಡಿಯಲ್ಲಿನ ಪರಿಸ್ಥಿತಿ ಚರ್ಚಿಸುವಂತೆ ಇಂದು ಸಂಸತ್ತು ಕಲಾಪದಲ್ಲಿ ಸದಸ್ಯರು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ರಾಜ್ಯಸಭೆಯಲ್ಲಿ ಇಂದು ನಿಯಮ 176ರಡಿ ಭಾರತ-ಚೀನಾ ಸಂಘರ್ಷವನ್ನು ಅಲ್ಪಾವಧಿಯ ಚರ್ಚೆಯ ವೇಳೆ ಚರ್ಚಿಸುವಂತೆ ನೊಟೀಸ್ ನೀಡಿದರು. ಪಕ್ಷದ ಸಂಸದ ಮನೀಶ್ ತಿವಾರಿ ಲೋಕಸಭೆಯಲ್ಲಿ ಸಂಘರ್ಷ ಕುರಿತು ಚರ್ಚೆ ನಡೆಸುವಂತೆ ನಿಲುವಳಿ ಸೂಚನೆ ನೊಟೀಸ್ ಜಾರಿಗೊಳಿಸಿದರು.
ಇದನ್ನೂ ಓದಿ: ತವಾಂಗ್ ಸಂಘರ್ಷ: ಭಾರತಕ್ಕಿಂತ ಚೀನಾ ಗಾಯಾಳು ಸೈನಿಕರ ಸಂಖ್ಯೆ ಹೆಚ್ಚು, ಭಾರತೀಯ ಸೈನಿಕರಿಂದ ಚೀನಾಗೆ ಮರ್ಮಾಘಾತ!
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಭಾರತ-ಚೀನಾ ಸೇನೆಯ ಯೋಧರ ಮುಖಾಮುಖಿಯ ಕುರಿತು ಮಾತ್ರ ಚರ್ಚಿಸಲು ಕಾಂಗ್ರೆಸ್ ಸಂಸದ ಶಕ್ತಿಸಿನ್ಹ್ ಗೋಹಿಲ್ ಅವರು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ಬ್ಯುಸಿನೆಸ್ ನೊಟೀಸ್ ಜಾರಿ ಮಾಡಿದರು.