ದೇಶ

ಅಂತರ್ಧರ್ಮೀಯ ವಿವಾಹ ಮಾಹಿತಿ ಸಂಗ್ರಹಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ಸಮಿತಿ ರಚನೆ: ಶ್ರದ್ಧಾ ರೀತಿಯ ಪ್ರಕರಣಗಳ ತಡೆಗೆ ಈ ಕ್ರಮ ಎಂದ ಸರ್ಕಾರ

Srinivas Rao BV

ಮುಂಬೈ: ಅಂತರ್ಧರ್ಮ, ಅಂತರ್ಜಾತಿ ದಂಪತಿಗಳು ಇಂತಹ ಕುಟುಂಬಗಳಿಂದ ದೂರವಾಗಿರುವ ಮಹಿಳೆಯರಿದ್ದರೆ ಅವರ ಮಾತೃ ಕುಟುಂಬದ ಬಗ್ಗೆ ಮಾಹಿತಿ ಸಂಗ್ರಹಿಸಲು ಮಹಾರಾಷ್ಟ್ರ ಸರ್ಕಾರ ಸಮಿತಿ ರಚನೆ ಮಾಡಿದೆ.

ಈ ಸಮಿತಿ 13 ಸದಸ್ಯರನ್ನು ಹೊಂದಿದ್ದು, ಅಂತರ್ಧರ್ಮ, ಅಂತರ್ಜಾತಿ ದಂಪತಿಗಳಿಗೆ ಸಂಬಂಧಿಸಿದ ಕಲ್ಯಾಣ ಯೋಜನೆಗಳು ಮತ್ತು ಕಾನೂನುಗಳನ್ನು ಅಧ್ಯಯನ ಮಾಡಲಿದೆ. 

ಸರ್ಕಾರದ ಈ ನಡೆಯನ್ನು ಪ್ರತಿಗಾಮಿ ಎಂದು ಹೇಳಿರುವ ವಿಪಕ್ಷ ಎನ್ ಸಿಪಿ ಜನರ ಖಾಸಗಿ ಜೀವನದ ಬಗ್ಗೆ ಗೂಢಚಾರಿಕೆ ಮಾಡುವ ಹಕ್ಕು ಏಕನಾಥ್ ಶಿಂಧೆ ಸರ್ಕಾರಕ್ಕೆ ಇಲ್ಲ ಎಂದು ಹೇಳಿದೆ.

ಹಿರಿಯ ಎನ್ ಸಿಪಿ ನಾಯಕ ಜಿತೇಂದ್ರ ಅಹ್ವಾದ್ ಟ್ವೀಟ್ ಮಾಡಿದ್ದು, ಯಾರನ್ನು ಯಾರು ಮದುವೆಯಾಗುತ್ತಾರೆ ಎಂಬುದನ್ನು ಗೂಢಚಾರಿಕೆ ಮಾಡಲು ಸರ್ಕಾರ ಯಾರು? ಉದಾರವಾದದ ಮಹಾರಾಷ್ಟ್ರದಲ್ಲಿ ಇದು ಪ್ರತಿಗಾಮಿ ನಡೆಯಾಗಿದೆ. ಪ್ರಗತಿಪರ ಮಹಾರಾಷ್ಟ್ರ ಎತ್ತ ಸಾಗುತ್ತಿದೆ? ಜನರ ಖಾಸಗಿ ಜೀವನದಿಂದ ದೂರವಿರಿ ಎಂದು ಸರ್ಕಾರಕ್ಕೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರ್ಕಾರದ ನಿರ್ಣಯ ಪ್ರಕಟಗೊಂಡಿದ್ದು, ಸಚಿವರಾದ ಮಂಗಲ್ ಪ್ರಭಾತ್ ಲೋಧಾ ನೇತೃತ್ವದ ಅಂತರ್ಜಾತಿ/ಅಂತರ್ಧರ್ಮ ವಿವಾಹ-ಕುಟುಂಬ ಸಮನ್ವಯ ಸಮಿತಿ ರಚನೆಯಾಗಿದೆ. ಈ ಸಮಿತಿ ಸದಸ್ಯರು ನಿಯಮಿತವಾಗಿ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರಾದ ಲೋಧಾ, ಶ್ರದ್ಧಾ ವಾಕರ್ ರೀತಿಯ ಪ್ರಕರಣಗಳು ಆಗದಂತೆ ಎಚ್ಚರ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT