ಶ್ರೀನಗರ: ಕಾಶ್ಮೀರಿ ಪಂಡಿತರ ಸುರಕ್ಷತೆ ಮುಖ್ಯವಾಗಿದ್ದು, ಕೂಡಲೇ ಅವರನ್ನು ಜಮ್ಮುವಿಗೆ ಸ್ಥಳಾಂತರಿಸಬೇಕು ಎಂದು ಡೆಮಾಕ್ರಟಿಕ್ ಆಜಾದ್ (ಡಿಎಪಿ) ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರ ಸುರಕ್ಷತೆ ಮುಖ್ಯವಾಗಿದ್ದು, ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಅವರನ್ನು ತಾತ್ಕಾಲಿಕವಾಗಿ ಜಮ್ಮುವಿಗೆ ಸ್ಥಳಾಂತರಿಸಬೇಕು ಎಂದು ಹೇಳಿದ್ದಾರೆ.
ಕೆಲ ಘಟನೆಗಳು ನಡೆದಿರುವುದು ದುರಾದೃಷ್ಟಕರ ವಿಚಾರ. ಜೀವವು ಮುಖ್ಯವಾಗಿದ್ದು ಕಾಶ್ಮೀರಿ ಪಂಡಿತ್ ಉದ್ಯೋಗಿಗಳನ್ನು ಜಮ್ಮುವಿನ ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಬೇಕು. ಪರಿಸ್ಥಿತಿ ಸುಧಾರಿಸಿದ ಬಳಿಕ ಮರಳಿ ಕಾಶ್ಮೀರಕ್ಕೆ ಕರೆ ತರಬೇಕು" ಎಂದು ತಿಳಿಸಿದರು.
ಇದನ್ನೂ ಓದಿ: ಕಾಶ್ಮೀರಿ ಪಂಡಿತರು ಎದುರಿಸಿದ ಭಯಾನಕತೆಗೆ ಅಪಮಾನ: 'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ ಚಿತ್ರ ಎಂದ ನಡಾವ್ ಗೆ ಬಿಜೆಪಿ ತಿರುಗೇಟು
ಉದ್ಯೋಗಕ್ಕಿಂತ ಜೀವಗಳು ಬಹಳ ಮುಖ್ಯ. ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂತಹ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
"ಸರ್ಕಾರದ ವಿಧಾನ ಏನೆಂಬುದು ನನಗೆ ತಿಳಿದಿಲ್ಲ, ಆದರೆ, ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ, ನಾವು ಇದನ್ನು ಮಾಡುತ್ತೇವೆ (ತಾತ್ಕಾಲಿಕವಾಗಿ ಕಾಶ್ಮೀರಿ ಪಂಡಿತರನ್ನು ಜಮ್ಮುವಿಗೆ ಸ್ಥಳಾಂತರಿಸುವುದು) ಎಂದು ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಕಳೆದ ಆರು ವರ್ಷಗಳಿಂದ ಕಾಯುತ್ತಿದ್ದೇವೆ. ಸಂಸತ್ತಿನಲ್ಲೂ ಹಲವು ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಅವರು ನಮಗೆ ಪಂಚಾಯತ್ ಚುನಾವಣೆ ಅಥವಾ ಡಿಡಿಸಿ ಚುನಾವಣೆಗಳನ್ನು ನಡೆಸುವುದಾಗಿ ಹೇಳುತ್ತಿದ್ದಾರೆ, ಆದರೆ ನಿಜವಾದ ಚುನಾವಣೆಯಾಗಿರುವ ವಿಧಾನಸಭೆಯ ಚುನಾವಣೆ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.