ದೇಶ

ಜೈ ಶ್ರೀರಾಮ್ ಘೋಷಣೆಗೆ ಮಮತಾ ಆಕ್ರೋಶ, ವಂದೇ ಭಾರತ್ ಎಕ್ಸ್ ಪ್ರೆಸ್ ಉದ್ಘಾಟನೆಯಲ್ಲಿ ವೇದಿಕೆ ಹಂಚಿಕೊಳ್ಳದ ಸಿಎಂ

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಾದ ಉಂಟಾಗಿದ್ದು, ಜೈ ಶ್ರೀರಾಮ್ ಘೋಷಣೆಗೆ ಸಿಎಂ ಮಮತಾ ಬ್ಯಾನರ್ಜಿ ತೀವ್ರವಾಗಿ ಆಕ್ರೋಶಗೊಂಡು, ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ.

ವೇದಿಕೆ ಹತ್ತಲು ನಿರಾಕರಿಸಿದ ಮಮತಾ ಬ್ಯಾನರ್ಜಿ ಕಾರ್ಯಕ್ರಮದ ಉದ್ದಕ್ಕೂ ವೇದಿಕೆಗೆ ಪರ್ಯಾಯವಾಗಿ ಹಾಕಲಾಗಿದ್ದ ಖುರ್ಚಿಯ ಮೇಲೆ ಕುಳಿತಿದ್ದರು. ಇದೇ ವೇಳೆ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರ ಸಾವಿಗೆ ಮಮತಾ ಸಂತಾಪ ಸೂಚಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಹೌರಾ ರೈಲ್ವೆ ನಿಲ್ದಾಣಕ್ಕೆ ಮಮತಾ ಬ್ಯಾನರ್ಜಿ ಆಗಮಿಸುತ್ತಿದ್ದಂತೆಯೇ ಬಿಜೆಪಿ ಬೆಂಬಲಿಗರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
 
ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಬಿಜೆಪಿ ಬೆಂಬಲಿಗರನ್ನು ನಿಯಂತ್ರಿಸಲು ಹರಸಾಹಸಪಟ್ಟರು, ಘೋಷಣೆಗಳನ್ನು ಕೂಗದಂತೆ ಬಿಜೆಪಿ ಬೆಂಬಲಿಗರಿಗೆ ಅಶ್ವಿನಿ ವೈಷ್ಣವ್ ಹಲವು ಬಾರಿ ಮನವಿ ಮಾಡಿದರು.

ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ ಮಮತಾ ಬ್ಯಾನರ್ಜಿ ಅವರನ್ನು ರೈಲ್ವೆ ಸಚಿವರು ವೇದಿಕೆಗೆ ಆಗಮಿಸುವಂತೆ ಹಲವು ಬಾರಿ ಮನವಿ ಮಾಡಿದರು. ಪ್ರಾರಂಭದಲ್ಲಿ ಮಮತಾ ಬ್ಯಾನರ್ಜಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲು ನಿರಾಕರಿಸಿದರು ಆದರೆ ರಾಜ್ಯಪಾಲರಾದ ಸಿವಿ ಆನಂದ ಬೋಸ್ ಅವರ ಮನವಿಯ ಹಿನ್ನೆಲೆಯಲ್ಲಿ ಆಕೆ ವೇದಿಕೆ ಏರದೇ ಹಾಗೆಯೇ ಭಾಷಣ ಮಾಡಿದರು.

SCROLL FOR NEXT