ದೇಶ

ಇಂದಿನಿಂದ ಎರಡು ದಿನ ಹೈದರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಚರ್ಚೆಗೆ ಬರುವ ವಿಷಯಗಳು ಏನೇನು?

Sumana Upadhyaya

ಹೈದರಾಬಾದ್: ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಇಂದು ಶನಿವಾರ ಅಪರಾಹ್ನ ಆರಂಭವಾಗಲಿರುವ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಇತ್ತೀಚಿನ ಗೆಲುವು, ಮುಂಬರುವ ಚುನಾವಣೆಯ ತಂತ್ರ ಮತ್ತು ಮೋದಿ ಸರ್ಕಾರದ ಎಂಟು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಪ್ರಮುಖ ಅಂಶಗಳು ಪ್ರಮುಖ ಚರ್ಚೆಯ ವಿಷಯವಾಗಿದೆ.

ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳಿಗಾಗಿ ಬಿಜೆಪಿಯ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಮತ್ತು ಸಶಸ್ತ್ರ ಪಡೆಗಳಲ್ಲಿ ಅಲ್ಪಾವಧಿಯ ನೇಮಕಾತಿ ಯೋಜನೆಯಾದ ಅಗ್ನಿಪಥ್ ವಿರುದ್ಧದ ಪ್ರತಿಭಟನೆಯ ನಂತರ ಸುಪ್ರೀಂ ಕೋರ್ಟ್ ಕಟುವಾಗಿ ಟೀಕೆ ಮಾಡಿದ ನಂತರ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ.

ಈ ಎರಡು ವಿಷಯಗಳ ಬಗ್ಗೆ ಬಿಜೆಪಿಯ ವರಿಷ್ಠರು ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಾರೆಯೇ ಎಂಬುದು ಮುಖ್ಯವಾಗಿದೆ. ನೂಪುರ್ ಶರ್ಮಾ ಹೇಳಿಕೆ ನಂತರ ಹಲವಾರು ಇಸ್ಲಾಮಿಕ್ ದೇಶಗಳಿಂದ ಭಾರತ ದೇಶದ ಬಗ್ಗೆ ಟೀಕೆ ವ್ಯಕ್ತವಾಗಿದೆ. 

ಎರಡು ದಿನಗಳ ಸಭೆಯು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಭಾಷಣದೊಂದಿಗೆ ಪ್ರಾರಂಭವಾಗಲಿದ್ದು, ಪ್ರಕ್ರಿಯೆಯಲ್ಲಿ ರಾಜಕೀಯ ನಿರ್ಣಯ ಸೇರಿದಂತೆ ಕನಿಷ್ಠ ಎರಡು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಬಿಜೆಪಿ ನೇತೃತ್ವದ NDA ಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ನಾಮನಿರ್ದೇಶನವೂ ಸಭೆಯಲ್ಲಿ ಚರ್ಚೆಗೆ ಬರಬಹುದು. 

ಪ್ರಧಾನಿ ನರೇಂದ್ರ ಮೋದಿಯವರ ಸಮಾರೋಪ ಭಾಷಣದೊಂದಿಗೆ ಸಭೆ ನಾಳೆ ಕೊನೆಗೊಳ್ಳಲಿದ್ದು, ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಪಕ್ಷದ ಚಟುವಟಿಕೆಗಳಿಗೆ ಅಜೆಂಡಾವನ್ನು ನಿಗದಿಪಡಿಸಲಿದ್ದಾರೆ. 

ಮಹಾರಾಷ್ಟ್ರ ಸರ್ಕಾರ ಮತ್ತೆ ತನ್ನ ತೆಕ್ಕೆಗೆ ಬಂದಿದ್ದು, ಬಿಜೆಪಿಯು ದೇಶದ ವಾಯವ್ಯ ಪ್ರದೇಶದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ನಂತರ ಈಗ ದಕ್ಷಿಣದ ರಾಜ್ಯಗಳತ್ತ ವಿಶೇಷವಾಗಿ ತೆಲಂಗಾಣದ ಮೇಲೆ ತನ್ನ ಕಣ್ಣು ನೆಟ್ಟಿದೆ. 2014 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಮತ್ತು ಕೇರಳದ ಕೋಯಿಕ್ಕೋಡ್ ನಂತರ ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೂರನೇ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇದಾಗಿದೆ.

SCROLL FOR NEXT