ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಕಾಲಿಘಾಟ್ ಪ್ರದೇಶದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದೆ. ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಸಿಎಂ ನಿವಾಸಕ್ಕೆ ನುಗ್ಗಿ, ರಾತ್ರಿ ಇಡೀ ಅಲ್ಲೆ ಕಳೆದಿರುವ ಆತಂಕಕಾರಿ ಘಟನೆ ನಡೆದಿದೆ.
ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ಮನೆಯ ಗೋಡೆ ಏರಿ ಒಳಗಡೆ ಹೋಗಿದ್ದಾನೆ. ಅಲ್ಲದೇ, ಸಿಎಂ ನಿವಾಸದಲ್ಲೇ ರಾತ್ರಿಯಿಡೀ ನಿಶಬ್ಧವಾಗಿ ಕುಳಿತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರ ಬೆಳವಣಿಗೆಗಳ ನಂತರ ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಗೆಲ್ಲಲು ಉತ್ತಮ ಅವಕಾಶಗಳಿವೆ: ಮಮತಾ
ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಆತನನ್ನು ಗಮನಿಸಿದ್ದು, ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಸಿಎಂ ಮಮತಾ ನಿವಾಸ ಭಾರಿ ಭದ್ರತಾ ವಲಯದಲ್ಲಿದೆ. ಅವರಿಗೆ 'ಝೆಡ್ ಪ್ಲಸ್' ಭದ್ರತೆಯೂ ಇದೆ. ಆದರೂ, ಮಧ್ಯರಾತ್ರಿಯಲ್ಲಿ ವ್ಯಕ್ತಿ ಸಿಎಂ ಮನೆಗೆ ಹೇಗೆ ಪ್ರವೇಶಿಸಿದ್ದಾನೆ ಎಂಬುದೇ ಭದ್ರತಾ ಸಿಬ್ಬಂದಿಗೂ ದೊಡ್ಡ ಪ್ರಶ್ನೆಯಾಗಿದೆ.
ಆ ವ್ಯಕ್ತಿ ಸಿಎಂ ಮನೆಗೆ ಏಕೆ ನುಗ್ಗಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆತನನ್ನು ಗಮನಿಸಿದರೆ ಸ್ವಲ್ಪಮಟ್ಟಿಗೆ ಮಾನಸಿಕವಾಗಿ ಅಸ್ವಸ್ಥನಾಗಿರುವಂತೆ ಕಾಣುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ನಾವು ಆತನೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ಆ ವ್ಯಕ್ತಿ ಇರುವ ಸ್ಥಳವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಯಾರಾದರೂ ಉದ್ದೇಶಪೂರ್ವಕವಾಗಿ ಸಿಎಂ ನಿವಾಸಕ್ಕೆ ಹೋಗುವಂತೆ ಸೂಚಿಸಿದ್ದಾರೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.