ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಥಾಣೆ ಮುನ್ಸಿಪಲ್ ಕಾರ್ಪೊರೇಷನ್(ಟಿಎಂಸಿ)ನ 66 ಮಾಜಿ ಕಾರ್ಪೊರೇಟರ್ ಗಳು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಬೆಂಬಲ ಘೋಷಿಸಿದ್ದಾರೆ.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು 67 ಶಿವಸೇನೆ ಮಾಜಿ ಕಾರ್ಪೊರೇಟರ್ ಗಳ ಪೈಕಿ 66 ಮಾಜಿ ಕಾರ್ಪೊರೇಟರ್ ಗಳು ಬುಧವಾರ ತಡರಾತ್ರಿ ಅವರನಿವಾಸದಲ್ಲಿ ಭೇಟಿಯಾದರು.
66 ಮಂದಿ ಏಕನಾಥ್ ಶಿಂಧೆ ಬಣ ಸೇರಿದ ಪರಿಣಾಮ, ಉದ್ಧವ್ ಠಾಕ್ರೆ ಅವರು ಟಿಎಂಸಿ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಂತರ ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಅತ್ಯಂತ ಪ್ರಮುಖ ನಾಗರಿಕ ಸಂಸ್ಥೆಯಾಗಿದೆ.
ಏಕನಾಥ್ ಶಿಂಧೆ ಅವರು ಬಂಡಾಯ ಆರಂಭಿಸಿದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ ಸರ್ಕಾರ ಜೂನ್ 29 ರಂದು ಪತನಗೊಂಡಿತು.