ಚೆನ್ನೈ: ಎಐಎಡಿಎಂಕೆ ನಾಯಕ ಇ ಪಳನಿಸ್ವಾಮಿ ವನಗರಂನಲ್ಲಿರುವ ಪಕ್ಷದ ಕಚೇರಿಗೆ ಸಾಮಾನ್ಯ ಮಂಡಳಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಮದ್ರಾಸ್ ಹೈಕೋರ್ಟ್ (Madras high court) ಕೆಲವೇ ಕ್ಷಣಗಳ ಹಿಂದೆ ಎಡಿಎಂಕೆ ಸಾಮಾನ್ಯ ಮಂಡಳಿ ಸಭೆ (General council meeting) ನಡೆಸಲು ಹಸಿರು ನಿಶಾನೆ ತೋರಿಸಿದೆ.
ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪುನರುಜ್ಜೀವನಗೊಳಿಸಲು, ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸುವ ಸಭೆಯನ್ನು ಸ್ಥಗಿತಗೊಳಿಸುವಂತೆ ಓ ಪನ್ನೀರಸೆಲ್ವಂ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ. ಈ ಮೂಲಕ ಪಳನಿಸ್ವಾಮಿಯವರಿಗೆ ಜಯ ಸಿಕ್ಕಿದ್ದು ಕಾನೂನು ಹೋರಾಟದಲ್ಲಿ ಪನ್ನೀರ್ ಸೆಲ್ವಂಗೆ ಹಿನ್ನಡೆಯಾಗಿದೆ.
ಅದಕ್ಕೂ ಮುನ್ನ ಇಂದು ಚೆನ್ನೈಯ ಎಡಿಎಂಕೆ ಕಚೇರಿಯ ಮುಂದೆ ಭಾರೀ ಪ್ರತಿಭಟನೆ, ಹೈಡ್ರಾಮವೇ ನಡೆದುಹೋಯಿತು. ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಪಕ್ಷದ ನಾಯಕರಾದ ಇ ಪಳನಿಸ್ವಾಮಿ (EPS) ಮತ್ತು ಒ ಪನ್ನೀರಸೆಲ್ವಂ (OPS) ಅವರ ಬೆಂಬಲಿಗರು ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ಸುಟ್ಟು ಹಾಕಿರುವ ಘಟನೆ ನಡೆಯಿತು. ಇ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ಅವರ ಬೆಂಬಲಿಗರ ಮಧ್ಯೆ ಘರ್ಷಣೆಯ ರೀತಿಯ ಪರಿಸ್ಥಿತಿ ನಡೆದುಹೋಯಿತು. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದರು.
ಇದನ್ನೂ ಓದಿ: ಎಐಎಡಿಎಂಕೆ ಜಿಸಿ ಮಹತ್ವದ ಸಭೆ: ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಇ ಪಳನಿಸ್ವಾಮಿ ನೇಮಕ, ಹಲವು ನಿರ್ಣಯ ಅಂಗೀಕಾರ
ಎಡಿಎಂಕೆ ಭವಿಷ್ಯ ನಿರ್ಧಾರ: ಇಂದು ಪಕ್ಷದ ಸಾಮಾನ್ಯ ಸಭೆಗೆ ನ್ಯಾಯಾಲಯ ಅನುಮತಿ ನೀಡಿದರೆ ಎಡಪ್ಪಾಡಿ ಪಳನಿಸ್ವಾಮಿಯವರನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವುದು ಬಹುತೇಕ ನಿಶ್ಚಿತವಾಗಿದೆ. ಅವರಿಗೆ ಪಕ್ಷದ ಸಾಮಾನ್ಯ ಮಂಡಳಿ ಸದಸ್ಯರಿದೆ ಬೆಂಬಲ ಅಧಿಕವಾಗಿದೆ. ಇದು ಪನ್ನೀರ್ ಸೆಲ್ವಂ ಬೆಂಬಲಿಗರನ್ನು ಉದ್ರೇಕಗೊಳಿಸಿ ತೀವ್ರ ಅಸಮಾಧಾನಕ್ಕೆ ಕಾರಣವಾಗಲಿದ್ದು ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ಪಕ್ಷ ಹೋಗುವುದು ಬಹುತೇಕ ಖಚಿತವಾಗಿದೆ.