ದೇಶ

ಪಂಚಾಯಿತಿ ಚುನಾವಣೆಯಲ್ಲಿ ಸೋಲು: ಹಂಚಿದ್ದ ಹಣ ವಾಪಸ್ ನೀಡುವಂತೆ ಧಮ್ಕಿ; ವ್ಯಕ್ತಿ ವಿರುದ್ಧ ಪ್ರಕರಣ!

Vishwanath S

ನೀಮುಚ್(ಮಧ್ಯಪ್ರದೇಶದ): ಮತದಾನದ ವೇಳೆ ಹಂಚಿಕೆ ಮಾಡಿದ್ದ ಹಣವನ್ನು ಹಿಂದಿರುಗಿಸುವಂತೆ ಜನರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಪಂಚಾಯತ್ ಚುನಾವಣೆಯಲ್ಲಿ ಸೋತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಾನಸ ತಹಸಿಲ್‌ನ ದೇವರಾನ್ ಗ್ರಾಮ ಪಂಚಾಯತ್‌ನ ಸರಪಂಚ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸೋತ ನಂತರ ಹಣವನ್ನು ಹಿಂದಿರುಗಿಸುವಂತೆ ರಾಜು ದೈಮಾ ಎಂಬ ವ್ಯಕ್ತಿ ಜನರನ್ನು ಕೇಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.

ರಾಜು ದೈಮಾ ಮತ್ತು ಆತನ ಸಹಚರ ಕನ್ಹಯ್ಯಾ ಬಂಜಾರಾ ವಿರುದ್ಧ ಐಪಿಸಿಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 294 (ಅಶ್ಲೀಲ ಕೃತ್ಯ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ರಾಂಪುರ ಪೊಲೀಸ್ ಠಾಣೆಯಲ್ಲಿ ಜನರಿಗೆ ಬೆದರಿಕೆ ಮತ್ತು ಥಳಿಸಿದ ಆರೋಪವನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಚುನಾವಣೆ ವೇಳೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಹೆಚ್ಚಿನ ಆರೋಪಗಳನ್ನು ಸೇರಿಸಬಹುದು ಎಂದು ಅವರು ಹೇಳಿದರು. ಮೂಲಗಳ ಪ್ರಕಾರ, ಪಂಚಾಯತಿ ಚುನಾವಣೆಯಲ್ಲಿ ಸೋತ ನಂತರ ಆರೋಪಿಯು ಜನರಿಂದ ಸುಮಾರು 4 ಲಕ್ಷ ರೂ. ವಸೂಲಿ ಮಾಡಿದ್ದಾನೆ.

SCROLL FOR NEXT