ದೇಶ

ಲಖನೌ ಲುಲು ಮಾಲ್‌ನಲ್ಲಿ ನಮಾಜ್ Vs ಹನುಮಾನ್ ಚಾಲೀಸ್: ನಾಲ್ವರ ಬಂಧನ

Lingaraj Badiger

ಲಖನೌ: ರಾಜಧಾನಿ ಲಖನೌದಲ್ಲಿ ಹೊಸದಾಗಿ ತೆರೆದಿರುವ ಲುಲು ಮಾಲ್‌ನಲ್ಲಿ ನಮಾಜ್ ಸಲ್ಲಿಸುವ ವಿಡಿಯೋ ವೈರಲ್ ಆದ ನಂತರ ಪ್ರತಿದಿನ ಆ ಮಾಲ್ ಹಲವು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಶನಿವಾರ, ಹಿಂದೂ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡ ಆದಿತ್ಯ ಮಿಶ್ರಾ ಎಂಬವರು ಮತ್ತು ಅವರ ಬೆಂಬಲಿಗರು ತಮ್ಮ ಕೈಯಲ್ಲಿ ಧ್ವಜಗಳು ಮತ್ತು ಬ್ಯಾನರ್‌ಗಳೊಂದಿಗೆ ಹನುಮಾನ್ ಚಾಲೀಸಾ ಪಠಣ ಮಾಡಲು ಮಾಲ್‌ಗೆ ಆಗಮಿಸಿದ್ದರು.

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಸ್ಸಿನಲ್ಲಿ ಕರೆದೊಯ್ಯಲು ಆರಂಭಿಸಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಕಣ್ತಪ್ಪಿಸಿ ಕುಳಿತಿದ್ದರು. ಪೊಲೀಸರು ಮಾಲ್‌ನ ಸುತ್ತಲೂ ಹುಡುಕಾಡಿ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು.

ಇದಕ್ಕೂ ಮುನ್ನ ಲುಲು ಮಾಲ್‌ನಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಶುಕ್ರವಾರವು ಸಹ ಇದೇ ರೀತಿಯ ಪ್ರಸಂಗಕ್ಕೆ ಕಾರಣರಾಗಿದ್ದರು. ಸಂಜೆ ಏಳು ಗಂಟೆ ಸುಮಾರಿಗೆ ಮೂವರು ಯುವಕರು ಅಲ್ಲಿಗೆ ಬಂದಾಗ ಭದ್ರತಾ ಸಿಬ್ಬಂದಿ ತಡೆದರು. ಈ ಬಗ್ಗೆ ಗಲಾಟೆ ಆರಂಭವಾಯಿತು. ಈ ಮಧ್ಯೆ ಯುವಕನೊಬ್ಬ ನಮಾಜ್ ಮಾಡುತ್ತೇನೆ ಎಂದು ಒಳಗೆ ಹೋಗಲಾರಂಭಿಸಿದಾಗ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತ್ತು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಶಾಂತಿ ಭಂಗ ಮತ್ತು ಸೆಕ್ಷನ್ 144ರ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿ, ಆರೋಪಿಗಳನ್ನು ಜೈಲಿಗೆ ಕಳುಹಿಸಲಾಯಿತು. ಇದೇ ಸಂದರ್ಭದಲ್ಲಿ ಮಾಲ್‌ನಲ್ಲಿ ಸುಂದರಕಾಂಡ ಪಠಣಕ್ಕೆ ಕರೆ ನೀಡಿದ್ದ ಹಿಂದೂ ಸಮಾಜ ಪಕ್ಷದ ಅಧ್ಯಕ್ಷ ಮತ್ತು ಹಿಂದೂ ಮುಖಂಡರಾದ ಕಮಲೇಶ್ ತಿವಾರಿ ಪತ್ನಿ ಕಿರಣ್ ತಿವಾರಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಲುಲ್ ಮಾಲ್ ನ ಸಿಬ್ಬಂದಿ ಸುದ್ದಿಗೋಷ್ಠಿ ನಡೆಸಿ, ತಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ. ಆದರೆ ಇಲ್ಲಿ ಯಾವುದೇ ರೀತಿಯ ಪ್ರಾರ್ಥನೆಗೆಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ರೈಲು ನಿಲ್ದಾಣಗಳಲ್ಲಿ ನಮಾಜ್ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ
ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ಮಾತನಾಡಿ, ಉತ್ತರ ಪ್ರದೇಶ ಸರ್ಕಾರ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರೈಲು ನಿಲ್ದಾಣಗಳಲ್ಲಿ ನಮಾಜ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ. ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

SCROLL FOR NEXT