ದೇಶ

ಪ್ಯಾಕ್ ಮಾಡಿದ, ಲೇಬಲ್ ಮಾಡಿದ ಆಹಾರದ ಮೇಲಿನ ಜಿಎಸ್‌ಟಿ ಹಿಂಪಡೆಯಿರಿ: ಕೇಂದ್ರಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಆಗ್ರಹ

Lingaraj Badiger

ನವದೆಹಲಿ: ಮೊದಲೇ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಹೊಸದಾಗಿ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಹಿಂಪಡೆಯುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇಡೀ ದೇಶವೇ ತೀವ್ರ ಬೆಲೆ ಏರಿಕೆಯನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ಈಗ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಹೇರುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಲಾಗಿದೆ. ಅದನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

25 ಕೆಜಿಗಿಂತ ಕಡಿಮೆ ತೂಕದ ಆಹಾರ ಧಾನ್ಯಗಳು, ಬೇಳೆಕಾಳುಗಳು ಮತ್ತು ಹಿಟ್ಟಿನಂತಹ ಮೊದಲೇ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿ ವಿಧಿಸಲಾಗಿದ್ದು, ಇದಿನಿಂದ ಜಾರಿಗೆ ಬಂದಿದೆ. 

ಜನರಿಗೆ ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್, ಪ್ರಯಾಣ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಲೆ ಏರಿಕೆಯಿಂದ ಜನರಿಗೆ ಪರಿಹಾರ ನೀಡುತ್ತಿರುವ ದೇಶದ ಏಕೈಕ ರಾಜ್ಯ ದೆಹಲಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯದ ಪ್ರಕಾರ, "25 ಕಿಲೋಗ್ರಾಂಗಳಿಗಿಂತ ಕಡಿಮೆ ಅಥವಾ ಸಮಾನವಾದ ಪ್ಯಾಕೇಜ್‌ಗಳಲ್ಲಿ ಮೊದಲೇ-ಪ್ಯಾಕ್ ಮಾಡಲಾದ ಸರಕುಗಳನ್ನು ಸರಬರಾಜು ಮಾಡುವ ನಿರ್ದಿಷ್ಟ ಸರಕುಗಳಿಗೆ ಜಿಎಸ್ ಟಿ ಅನ್ವಯಿಸುತ್ತದೆ".

SCROLL FOR NEXT