ನವದೆಹಲಿ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ದಾಖಲಾಗಿದ್ದ ಎಲ್ಲಾ 6 ಎಫ್ಐಆರ್ ಗಳಲ್ಲೂ ಸುಪ್ರೀಂ ಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದೆ. ಜುಬೈರ್ ನ್ನು ಬಂಧನದಲ್ಲೇ ಮುಂದುವರೆಸಲು ಯಾವುದೇ ಕಾರಣ, ಸಮರ್ಥನೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡುವ ವೇಳೆ ಹೇಳಿದೆ.
20,000 ರೂಪಾಯಿಗಳ ಬಾಂಡ್ ನ್ನು ಪಟಿಯಾಲಾ ಹೌಸ್ ನ ಸಿಎಂಎಂ ಎದುರು ಹಾಜರುಪಡಿಸಬೇಕು ಹಾಗೂ ಅದನ್ನು ಹಾಜರುಪಡಿಸುತ್ತಿದ್ದಂತೆಯೇ ಅರ್ಜಿದಾರರನ್ನು ಸಂಜೆ 6 ಗಂಟೆ ಒಳಗೆ ತಿಹಾರ್ ಜೈಲ್ ನಿಂದ ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿದೆ. ಉತ್ತರ ಪ್ರದೇಶದ ಎಫ್ಐಆರ್ ನಲ್ಲಿ ಉಲ್ಲೇಖವಾಗಿರುವ ಆರೋಪಗಳು ದೆಹಲಿ ಪೊಲೀಸ್ ಎಫ್ಐಆರ್ ಗಳಲ್ಲಿ ಉಲ್ಲೇಖವಾಗಿರುವ ಆರೋಪಗಳು ಒಂದೇ ರೀತಿ ಇರುವುದರಿಂದ ಜುಬೈರ್ ನ್ನು ಬಂಧನದಲ್ಲಿ ಮುಂದುವರೆಸುವುದು ಸಮರ್ಥನೀಯವಲ್ಲ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: 'ಸುಪ್ರೀಂ' ಮೆಟ್ಟಿಲೇರಿದ ಮೊಹಮ್ಮದ್ ಜುಬೈರ್; ಅವರ ಆಕ್ಷೇಪಾರ್ಹ ಟ್ವೀಟ್ ನಿಂದ ಮನನೊಂದವರೆಷ್ಟು?- ದೆಹಲಿ ಕೋರ್ಟ್ ಪ್ರಶ್ನೆ
ನಾವು ಆತನನ್ನು ಟ್ವೀಟಿಸುವುದರಿಂದ ತಡೆಯುವುದಕ್ಕೆ ಸಾಧ್ಯವಿಲ್ಲ. ಆತನ ವಾಕ್ ಸ್ವಾತಂತ್ರ್ಯದ ಹಕ್ಕು ಕಸಿಯುವುದಕ್ಕೆ ಸಾಧ್ಯವಿಲ್ಲ. ಆತ ಕಾನೂನಿಗೆ ಉತ್ತರದಾಯಿಯಾಗಿದ್ದಾನೆ. ಸಾಕ್ಷ್ಯಗಳು ಸಾರ್ವಜನಿಕವಾಗಿ ಲಭ್ಯವಿರಲಿದೆ ಎಂದು ಕೋರ್ಟ್ ಹೇಳಿದೆ. ಎಲ್ಲಾ ಎಫ್ಐಆರ್ ಗಳ ತನಿಖೆಗಳನ್ನೂ ಉತ್ತರ ಪ್ರದೇಶ ಪೊಲೀಸರಿಂದ ದೆಹಲಿ ಪೊಲೀಸರ ವಿಶೇಷ ಸೆಲ್ ಗೆ ವರ್ಗಾವಣೆ ಮಾಡಲಾಗುವುದು ಎಂದು ಕೋರ್ಟ್ ಆದೇಶಿಸಿದೆ.