ದೇಶ

ಸಿಎಂ ಬದಲಾದರೆ ಆಕಾಶ ಕಳಚಿ ಬೀಳುವುದಿಲ್ಲ: ಸುಪ್ರೀಂ ಕೋರ್ಟ್ ನಲ್ಲಿ ಶಿಂಧೆ ಬಣದ ವಾದ

Srinivas Rao BV

ನವದೆಹಲಿ: ಶಿವಸೇನೆ ಹಾಗೂ ಅದರ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಗಳು, ಪಕ್ಷಾಂತರ, ವಿಲೀನ, ಅನರ್ಹಕ್ಕೆ ಸಂಬಂಧಿಸಿದಂತೆ ಹಲವು ಸಾಂವಿಧಾನಿಕ ಪ್ರಶ್ನೆಗಳು ಉದ್ಭವವಾಗುವಂತೆ ಮಾಡುತ್ತಿದ್ದು, ಇದನ್ನು ಇತ್ಯರ್ಥಪಡಿಸುವುದಕ್ಕೆ ಉನ್ನತ ಪೀಠದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಜು.20 ರಂದು ಹೇಳಿದೆ. 

ನ್ಯಾ.ಕೃಷ್ಣ ಮುರಾರಿ, ಹಿಮಾ ಕೊಹ್ಲಿ, ನ್ಯಾ. ಎನ್ ವಿ ರಮಣ ಅವರಿದ್ದ ಪೀಠ, ಉನ್ನತ ಪೀಠ ಕೈಗೆತ್ತಿಕೊಳ್ಳಬೇಕಿರುವ ವಿಷಯಗಳನ್ನು ಜುಲೈ 27 ವೇಳೆಗೆ  ಸಿದ್ಧಪಡಿಸಿಕೊಳ್ಳುವಂತೆ ಅರ್ಜಿದಾರರಿಗೆ ಸೂಚನೆ ನೀಡಿದ್ದು ಆ.1 ರ ವೇಳೆಗೆ ವಿಚಾರಣೆ ನಡೆಸುವುದಾಗಿ ಹೇಳಿದೆ. ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಂಬಂಧಿಸಿದ ಬಾಕಿ ಇದ್ದ 5 ಬೇರೆ ಬೇರೆ ಅರ್ಜಿಗಳನ್ನು ನ್ಯಾಯ ಪೀಠ ವಿಚಾರಣೆ ನಡೆಸುತ್ತಿತ್ತು. 

ಉದ್ಧವ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ವಿಧಾನಸಭೆಯ ಸ್ಪೀಕರ್ ಪಕ್ಷದಿಂದ ನಿಯೋಜಿಸಿದ್ದ ವಿಪ್ ನ್ನು ಹೊರತುಪಡಿಸಿ ಬೇರೆ ವಿಪ್ ನ್ನು ಪರಿಗಣಿಸಿರುವುದು ಮೂರ್ಖತನ ಎಂದು ನ್ಯಾಯಪೀಠದೆದುರು ಹೇಳಿದ್ದಾರೆ. 

ಜನರ ತೀರ್ಪು ಏನಾಗಬೇಕು? 10 ನೇ ಷೆಡ್ಯೂಲ್ ನ್ನು ಬುಡಮೇಲು ಮಾಡಲಾಗಿದೆ ಹಾಗೂ ಪಕ್ಷಾಂತರವನ್ನು ಪ್ರಚೋದಿಸಲಾಗಿದೆ ಎಂದು ಸಿಬಲ್ ನ್ಯಾಯಪೀಠದ ಎದುರು ವಾದಿಸಿದರು.
 
ಶಿಂಧೆ ಬಣದ ಪರ ವಾದ ಮಂಡಿಸಿದ ಹರೀಶ್ ಸಾಳ್ವೆ, ಓರ್ವ ನಾಯಕ ಪಕ್ಷದಲ್ಲಿ ಹೆಚ್ಚಿನ ಬೆಂಬಲ ಪಡೆದು ಅದೇ ಪಕ್ಷದಲ್ಲಿದ್ದುಕೊಂಡು ಅದರ ನಾಯನನ್ನು ಪ್ರಶ್ನಿಸಿದರೆ, ಅದು ಪಕ್ಷಾಂತರವಲ್ಲ ಎಂದು ವಾದಿಸಿದರು.
 
ಒಂದು ರಾಜಕೀಯ ಪಕ್ಷದಲ್ಲಿರುವ ಮಂದಿ, ಮತ್ತೋರ್ವ ನಮ್ಮನ್ನು ಮುನ್ನಡೆಸಬೇಕು ಎಂದು ಬಯಸಿದರೆ ಅದರಲ್ಲಿ ತಪ್ಪೇನಿದೆ? ಮುಖ್ಯಮಂತ್ರಿ ಬದಲಾದರೆ ಆಕಾಶ ಕಳಚಿ ಬೀಳುವುದಿಲ್ಲ, ಸ್ಪೀಕರ್ ನ್ನು ಕಾನೂನಾತ್ಮಕವಾಗಿ ನೇಮಕ ಮಾಡಲಾಗಿದೆಯೋ ಇಲ್ಲವೋ ಎಂಬುದು ಪ್ರಶ್ನೆ ಎಂದು ಸಾಳ್ವೆ ಹೇಳಿದ್ದಾರೆ. 

SCROLL FOR NEXT