ದೇಶ

ಸೋನಿಯಾ ಇಡಿ ವಿಚಾರಣೆ ವಿರೋಧಿಸಿ ಪ್ರತಿಭಟನೆ: ಚಿದಂಬರಂ, ಮಾಕೆನ್ ಬಂಧನ, ಕೈ ಕಾರ್ಯಕರ್ತರ ಮೇಲೆ ಜಲ ಫಿರಂಗಿ ಪ್ರಯೋಗ

Nagaraja AB

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ  ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ, ಅಜಯ್ ಮಾಕೆನ್, ಪವನ್ ಖೇರ್, ಜೈರಾಮ್ ರಮೇಶ್, ವಿವೇಕ್ ಟಂಕಾ, ಅಶೋಕ್ ಗೆಹ್ಲೋಟ್, ಶಶಿ ತರೂರ್ ಮತ್ತಿತರನ್ನು ಬಂಧಿಸಲಾಗಿದೆ. ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲ ಫಿರಂಗಿ ಪ್ರಯೋಗಿಸಲಾಗಿದೆ.

ಬಸ್ ನಿಂದ ವಿಡಿಯೋ ಹೇಳಿಕೆ ನೀಡಿರುವ ಶಶಿ ತರೂರ್, ಗೊತ್ತಿಲ್ಲದ ಸ್ಥಳಕ್ಕೆ ನಮ್ಮನ್ನು ಕರೆದೊಯ್ಯಲಾಗುತ್ತಿದೆ. ಎರಡು ಇತರ ಪೊಲೀಸ್ ಬಸ್ ಗಳಲ್ಲಿ ಪಕ್ಷದ ಸಂಸದರು ಹಾಗೂ  ಸಹೋದ್ಯೋಗಿಗಳಿದ್ದಾರೆ. ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ರೀತಿಯ ಸರ್ಕಾರದ ಕಾರ್ಯವೈಖರಿಯಿಂದ ಅತ್ಯಂತ ನಿರಾಸೆಯಾಗಿದೆ ಎಂದಿದ್ದಾರೆ.

ದೇಶದಲ್ಲಿ ಕೇಂದ್ರದ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಆದರೆ, ಅದನ್ನು ಹತ್ತಿಕ್ಕಲಾಗುತ್ತಿದೆ  ಎಂದು ಸಚಿನ್ ಪೈಲಟ್ ಆರೋಪಿಸಿದ್ದಾರೆ. ಪಕ್ಷದ ಕೇಂದ್ರ ಕಚೇರಿ ಹೊರಗಡೆ ಪಕ್ಷದ ಸಂಸದರು ಹಾಗೂ ಸಿಡಬ್ಲ್ಯೂಸಿ ಸದಸ್ಯರನ್ನು ಬಂಧಿಸಲಾಗಿದೆ ಎಂದು ಪಕ್ಷದ ವಕ್ತಾರ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಅಕ್ಬರ್ ರಸ್ತೆಯ ಪಕ್ಷದ ಕೇಂದ್ರ ಕಚೇರಿ ಸುಮುತ್ತಮುತ್ತ ಪ್ರತಿಭಟನೆ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿದ ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT