ದೇಶ

ಬಂಧನದ ಬಳಿಕ ಸಿಎಂ ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ್ದ ಸಚಿವ ಪಾರ್ಥ ಚಟರ್ಜಿ; ಮೌನವಹಿಸಿದ ದೀದಿ!

Vishwanath S

ನವದೆಹಲಿ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಬಂಧನದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮೂರು ಕರೆಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ಆ ಮೂರು ಕರೆಗಳಿಗೂ ಉತ್ತರಿಸಿಲ್ಲ ಎಂದು ಅಧಿಕೃತ ದಾಖಲೆ ಬಹಿರಂಗಪಡಿಸಿದೆ.

ಪಾರ್ಥ ಚಟರ್ಜಿಯವರ 'ಅರೆಸ್ಟ್ ಮೆಮೊ' ಹೇಳುವಂತೆ 70 ವರ್ಷ ವಯಸ್ಸಿನ ಅವರು ತಮ್ಮ ಬಂಧನದ ಬಳಿಕ ಆ ವಿಚಾರವನ್ನು ತಮ್ಮ ಸ್ನೇಹಿತರು/ ಸಂಬಂಧಿಗಳಿಗೆ ಖಚಿತಪಡಿಸಲು ಬಾಸ್ ಮಮತಾ ಬ್ಯಾನರ್ಜಿಯನ್ನು ಆಯ್ಕೆ ಮಾಡಿದ್ದಾರೆ.

ಬೆಳಗಿನ ಜಾವ 1.55ರ ಸುಮಾರಿಗೆ ಆವರನ್ನು ಬಂಧಿಸಿದ ನಂತರ ಸಿಎಂಗೆ ಪಾರ್ಥ ಚಟರ್ಜಿ ತಮ್ಮ ಮೊದಲ ಕರೆಯನ್ನು 2.33ಕ್ಕೆ ಮಾಡಿದ್ದಾರೆನ್ನಲಾಗಿದೆ.  ಮತ್ತೆ 3.37 ಮತ್ತು 9.35 ಕ್ಕೆ ಮತ್ತೆ ಕರೆ ಮಾಡಿರೋದು ದಾಖಲೆಯಲ್ಲಿ ಗೊತ್ತಾಗಿದೆ.

ಪೋಲೀಸರ ಪ್ರಕಾರ, ಯಾವುದೇ ಆರೋಪಿಗೆ ತಮ್ಮ ಬಂಧನದ ಬಗ್ಗೆ ತಿಳಿಸಲು ಸಂಬಂಧಿಕರು ಅಥವಾ ಸ್ನೇಹಿತರಿಗೆ ಕರೆ ಮಾಡಲು ಅವಕಾಶ ನೀಡಲಾಗುತ್ತದೆ. ಚಟರ್ಜಿಯವರು ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಉನ್ನತ ಸಹಾಯಕರಲ್ಲಿ ಒಬ್ಬರಾಗಿದ್ದರು. ಆದರೆ 20 ಕೋಟಿ ಪತ್ತೆ ಪ್ರಕರಣದ ಬಳಿಕ ಪಾರ್ಥ ಚಟರ್ಜಿ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಮೌನ ವಹಿಸಿದ್ದಾರೆ.

ಬಂಗಾಳದ ಶಿಕ್ಷಣ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಶನಿವಾರದಂದು ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಆರೋಪದ ಮೇಲೆ ಬಂಧಿಸಲಾಯಿತು. ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯಿಂದ ಶಾಲಾ ಶಿಕ್ಷಕರು ಮತ್ತು ಬೋಧಕ ಸಿಬ್ಬಂದಿಗಳ ಅಕ್ರಮ ನೇಮಕಾತಿಯಲ್ಲಿ ಅವರ ಪಾತ್ರವಿದೆ ಎಂದು ಆರೋಪಿಸಲಾಗಿದೆ.

ನಂತರ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕರಾದ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ಸುಮಾರು  20 ಕೋಟಿ ರೂ. ನಗದು ಪತ್ತೆಯಾಗಿದೆ. ಇದು ಸಚಿವರ ಬಂಧನಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.

SCROLL FOR NEXT