ದೇಶ

ಮದ್ಯದ ಅಂಗಡಿಗೆ ಸಗಣಿ ಎಸೆದ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ, ವಿಡಿಯೋ ವೈರಲ್

Lingaraj Badiger

ನಿವಾರಿ: ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಅವರು ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಓರ್ಚಾ ಪಟ್ಟಣದಲ್ಲಿ ಮದ್ಯದ ಅಂಗಡಿಯೊಂದಕ್ಕೆ ಹಸುವಿನ ಸಗಣಿ ಎಸೆದು, ಮದ್ಯ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ರಾಜಧಾನಿ ಭೋಪಾಲ್‌ನಿಂದ 330 ಕಿಮೀ ದೂರದಲ್ಲಿರುವ ರಾಮರಾಜ ಮಂದಿರಕ್ಕೆ ಹೆಸರುವಾಸಿಯಾದ ಧಾರ್ಮಿಕ ಪಟ್ಟಣವಾದ ಓರ್ಚಾದಲ್ಲಿ ಮಂಗಳವಾರ ಸಂಜೆ ಉಮಾ ಭಾರತಿ ಅವರು ಮದ್ಯದಂಗಡಿಗೆ ಹಸುವಿನ ಸಗಣಿ ಎಸೆದಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮಂಗಳವಾರದ ಘಟನೆಯ ನಂತರ ಟ್ವೀಟ್ ಮಾಡಿದ ಉಮಾಭಾರತಿ, ಮದ್ಯದಂಗಡಿ ನಡೆಸಲು ಅನುಮತಿ ನೀಡುವುದು ಸರಿಯಲ್ಲ. ಪವಿತ್ರ ಪಟ್ಟಣವಾದ ಓರ್ಚಾದಲ್ಲಿ ಮದ್ಯದಂಗಡಿ ತೆರೆಯುವುದು ಅಪರಾಧ ಎಂದು ಹೇಳಿದ್ದಾರೆ. ಆದರೆ, ಅಂಗಡಿ ಮಂಜೂರಾದ ಸ್ಥಳದಲ್ಲಿಯೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋದಲ್ಲಿ ಉಮಾ ಭಾರತಿ ಅವರು, ನೋಡಿ, ನಾನು ಗೋವಿನ ಸಗಣಿ ಎಸೆದಿದ್ದೇನೆ. ಕಲ್ಲು ತೂರಾಟ ನಡೆಸಿಲ್ಲ ಎಂದು ಹೇಳಿರುವುದು ರೆಕಾರ್ಡ್ ಆಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಭೋಪಾಲ್‌ನಲ್ಲಿ ಮದ್ಯದ ಅಂಗಡಿಯೊಂದಕ್ಕೆ ಕಲ್ಲು ತೂರಿದ್ದರು.

SCROLL FOR NEXT