ನವದೆಹಲಿ: ಕೇಂದ್ರ ಸರ್ಕಾರದ ಮನವಿ ಮೇರೆಗೆ ಕೆಕೆ ವೇಣುಗೋಪಾಲ್ ಅವರು ಭಾರತ ಸರ್ಕಾರದ ಅಟಾರ್ನಿ ಜನರಲ್ ಆಗಿ ಮುಂದುವರೆಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸುದ್ದಿಸಂಸ್ಥೆ ವರದಿ ಮಾಡಿದ್ದು, ಹಾಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸೇವಾವಧಿ ಜೂನ್ 30, 2022ಕ್ಕೆ ಕೊನೆಯಾಗಲಿದ್ಜು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಆಗಿ ಮುಂದುವರೆಯಲು ಕೆ.ಕೆ ವೇಣುಗೋಪಾಲ್ ಅವರನ್ನು ಕೇಂದ್ರ ಸರ್ಕಾರ ಮನವಿ ಮಾಡಿತ್ತು.
ಇದನ್ನೂ ಓದಿ: ಸಾವರ್ಕರ್ ವಿರುದ್ಧದ ಹೇಳಿಕೆ: ಓವೈಸಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಅನುಮತಿಗೆ ಎ.ಜಿ ನಕಾರ
ಈ ಮನವಿಗೆ ಸ್ಪಂದಿಸಿರುವ ಕೆಕೆ ವೇಣುಗೋಪಾಲ್ ಅವರು, ಅಟಾರ್ನಿ ಜನರಲ್ ಆಗಿ ಸೇವೆ ಮುಂದುವರೆಸಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಕೂಡ ಕೆಕೆ ವೇಣುಗೋಪಾಲ್ ಅವರು ಜೂನ್ 30, 2022ರವರೆಗೆ ಸೇವಾವಧಿ ವಿಸ್ತರಣೆಗೆ ಒಪ್ಪಿಗೆ ನೀಡಿದ್ದರು. ಇದೀಗ ಮತ್ತೆ 3 ತಿಂಗಳ ಅವಧಿಗೆ ಅವರ ಅಧಿಕಾರಾವಧಿ ವಿಸ್ತರಣೆಯಾದಂತಾಗಿದೆ.
91 ವರ್ಷದ ವೇಣುಗೋಪಾಲ್ ಅವರನ್ನು ಜುಲೈ 2017 ರಲ್ಲಿ ಭಾರತದ ಅಟಾರ್ನಿ ಜನರಲ್ ಆಗಿ ಭಾರತದ ರಾಷ್ಟ್ರಪತಿಗಳು ನೇಮಕ ಮಾಡಿದ್ದರು. ಮುಕುಲ್ ರೋಹಟಗಿ ಬಳಿಕ ಆ ಸ್ಥಾನಕ್ಕೆ ವೇಣುಗೋಪಾಲ್ ರನ್ನು ನೇಮಸಲಾಗಿತ್ತು. ಸುಪ್ರೀಂ ಕೋರ್ಟ್ನ ಖ್ಯಾತ ವಕೀಲರಾದ ವೇಣುಗೋಪಾಲ್ ಅವರು ಸಾಂವಿಧಾನಿಕ ಮತ್ತು ಕಾರ್ಪೊರೇಟ್ ಕಾನೂನಿನ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. 1979 ಮತ್ತು 1980 ರ ನಡುವೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅವರಿಗೆ 2002 ರಲ್ಲಿ ಪದ್ಮಭೂಷಣ ಮತ್ತು 2015 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.