ದೇಶ

ಸೇನೆ ಭೂಮಿ ಕಬಳಿಕೆ ಪ್ರಕರಣ: ಇಡಿ ಕಚೇರಿಗೆ ಗೈರಾದ ಸಿಎಂ ಸೋರೆನ್ ಸಹಾಯಕನ ಮೇಲೆ ಇಡಿ ದಾಳಿ, 12 ಸ್ಥಳಗಳಲ್ಲಿ ಶೋಧ!

Vishwanath S

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜಾರಿ ನಿರ್ದೇಶನಾಲಯ ಕಚೇರಿಗೆ ಗೈರುಹಾಜರಾದ ಬೆನ್ನಲ್ಲೆ ಇಂದು ಅವರ ಆಪ್ತರಲ್ಲಿ ಒಬ್ಬರಾದ ಅಮಿತ್ ಅಗರ್ವಾಲ್ ಸೇರಿದ ಜಾರ್ಖಂಡ್ ಮತ್ತು ಬಂಗಾಳದ ಕನಿಷ್ಠ 12 ಸ್ಥಳಗಳಲ್ಲಿ ಶೋಧ ನಡೆಸಿದೆ.

ಮೂಲಗಳ ಪ್ರಕಾರ, ಅಗರವಾಲ್ ಅವರನ್ನು ಈ ಹಿಂದೆ ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಪ್ರಕರಣ ಸಂಬಂಧ ವಿಚಾರಣೆ ವೇಳೆ ಹಲವು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ ನಂತರ ದಾಳಿಗಳನ್ನು ನಡೆಸಿದೆ.

ಜಾರ್ಖಂಡ್‌ನಲ್ಲಿ ಸೇನೆಯ ಹಲವಾರು ಎಕರೆ ಭೂಮಿಯನ್ನು 'ಭೂ ಮಾಫಿಯಾಗಳು' ಮತ್ತು ರಾಜಕಾರಣಿಗಳು ಶಾಮೀಲಾಗಿ ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ರಕ್ಷಣಾ ಪಡೆಗಳಿಗೆ ಸೇರಿದ ಭೂಮಿಯನ್ನು ಮಾರಾಟ ಮಾಡಲು ನಕಲಿ ದಾಖಲೆಗಳನ್ನು ಬಳಸಿದ ಆರೋಪದ ಮೇಲೆ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಸಶಸ್ತ್ರ ಅರೆಸೈನಿಕ ಪಡೆಗಳ ಸಹಾಯದಿಂದ ಇಡಿ ಅಧಿಕಾರಿಗಳು ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದರು.

ರಾಂಚಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸುಮಾರು ಎಂಟು ಸ್ಥಳಗಳನ್ನು ಶೋಧಿಸಲಾಗುತ್ತಿದ್ದು, ಬಂಧಿತ ಉದ್ಯಮಿ ಅಮಿತ್ ಅಗರ್ವಾಲ್‌ಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಇಡಿ ತಂಡಗಳು ಕೆಲವು ರಿಯಲ್ ಎಸ್ಟೇಟ್ ಡೀಲರ್‌ಗಳು, ಬ್ಯುಸಿನೆಸ್ ಸಹವರ್ತಿಗಳು ಮತ್ತು ಅಗರ್ವಾಲ್‌ಗೆ ಸಂಪರ್ಕ ಹೊಂದಿರುವ ಸಂಸ್ಥೆಗಳ ಆವರಣವನ್ನು ಸಹ ಶೋಧಿಸುತ್ತಿವೆ.

ಸೋರೆನ್‌ನ ಆಪ್ತ ಸಹಾಯಕ ಅಗರ್ವಾಲ್‌ಗೆ ಸಂಬಂಧಿಸಿದ ನಿವೇಶನಗಳ ಮೇಲೆ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಅವರ ಮೇಲೆ ದಾಳಿಗಳು ನಡೆದಿದ್ದು ಅದರ ತನಿಖೆಗಳು ಇನ್ನೂ ನಡೆಯುತ್ತಿವೆ.

ಜುಲೈ 31ರಂದು ಕೋಲ್ಕತ್ತಾದಲ್ಲಿ ವಕೀಲ ರಾಜೀವ್ ಕುಮಾರ್ ಅವರಿಂದ 50 ಲಕ್ಷ ರೂಪಾಯಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಅಮಿತ್ ಅಗರವಾಲ್ ಅವರನ್ನು ಬಂಧಿಸಿದ್ದರು.

ಇನ್ನು ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿ ಇಡಿ ನವೆಂಬರ್ 3ರಂದು ಸೊರೆನ್ ಅವರನ್ನು ವಿಚಾರಣೆಗೆ ಕರೆದಿತ್ತು.

ಆದಾಗ್ಯೂ ಸೋರೆನ್ ಇಡಿ ಕಚೇರಿಗೆ ಗೈರಾಗಿದ್ದರು. ಇನ್ನು ರಾಂಚಿಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ  ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. 'ನಾನು ತಪ್ಪಿತಸ್ಥನಾಗಿದ್ದರೆ, ನೀವು ನನ್ನನ್ನು ಏಕೆ ಪ್ರಶ್ನಿಸುತ್ತೀರಿ? ಸಾಧ್ಯವಾದರೆ ಬಂದು ನನ್ನನ್ನು ಬಂಧಿಸಿ ಎಂದು ಸವಾಲು ಎಸೆದಿದ್ದಾರೆ.
 

SCROLL FOR NEXT