ದೇಶ

ವಿಜಯ್ ಮಲ್ಯ ಪರ ವಕಾಲತ್ತು ಮುಂದುವರೆಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್'ಗೆ ವಕೀಲರಿಂದ ಮನವಿ

Manjula VN

ನವದೆಹಲಿ: ಭಾರತದ ಬ್ಯಾಂಕ್​ಗಳಿಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ನಮ್ಮ ಜೊತೆ ಸಹಕರಿಸುತ್ತಿಲ್ಲ. ಹೀಗಾಗಿ, ಅವರಿಗೆ ಯಾವ ಸೂಚನೆಗಳನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಲ್ಯ ಪರ ವಕಾಲತ್ತು ವಹಿಸಲು ಸಾಧ್ಯವಿಲ್ಲ ಎಂದು ವಿಜಯ್ ಮಲ್ಯ ಪರ ವಕೀಲರು ಸುಪ್ರೀಂ ಕೋರ್ಟ್​ ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಹಲವು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರು ಅಜ್ಞಾತವಾಗಿದ್ದಾರೆ. ನಮ್ಮ ಜೊತೆಗೆ ಯಾವುದೇ ಸಂವಹನಕ್ಕೆ ಪ್ರತಿಕ್ರಿಯಿಸದ ಕಾರಣ ಈ ಪ್ರಕರಣದ ವಾದದಿಂದ ನಮ್ಮನ್ನು ಮುಕ್ತಗೊಳಿಸಬೇಕೆಂದು ವಿಜಯ್ ಮಲ್ಯ ಪರ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ವಿಜಯ್ ಮಲ್ಯ ಪರ ವಕೀಲರಾದ ಇಸಿ ಅಗರ್‌ವಾಲಾ ಅವರು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ನಮಗೆ ಇರುವ ಮಾಹಿತಿಯ ಪ್ರಕಾರ, ವಿಜಯ್ ಮಲ್ಯ ಇಂಗ್ಲೆಂಡ್​​ನಲ್ಲಿ ನೆಲೆಸಿದ್ದಾರೆ. ಆದರೆ, ಅವರು ಈಗ ನನ್ನೊಂದಿಗೆ ಮಾತುಕತೆ ನಡೆಸುತ್ತಿಲ್ಲ. ನನ್ನ ಬಳಿ ಅವರ ಇಮೇಲ್ ವಿಳಾಸವಿದೆ. ಆದರೆ, ಅವರು ನನಗೆ ಅವರ ಕೇಸಿನ ಬಗ್ಗೆ ಯಾವುದೇ ಸೂಚನೆಗಳನ್ನೂ ನೀಡುತ್ತಿಲ್ಲ. ಅವರನ್ನು ಪತ್ತೆಹಚ್ಚಲು ಸಾಧ್ಯವಾಗದ ಕಾರಣ ಮತ್ತು ಅವರು ಭಾರತದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ನಾನು ಅವರನ್ನು ಪ್ರತಿನಿಧಿಸಲು ಇನ್ನುಮುಂದೆ ಸಾಧ್ಯವಿಲ್ಲ. ಈ ಪ್ರಕರಣದ ವಕಾಲತಿನಿಂದ ನನ್ನನ್ನು ಮುಕ್ತನನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ.

SCROLL FOR NEXT