ದೆಹಲಿ: ದೇಶವೇ ಬೆಚ್ಚಿ ಬೀಳುವ ರೀತಿಯಲ್ಲಿ ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ಎಂಬ ಯುವತಿಯ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಅಫ್ತಾಬ್ ಎಂಬ ಯುವಕ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳನ್ನು ಹತ್ಯೆ ಮಾಡಿ 32 ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದ. ಈ ಪೈಕಿ ದೇಹದ 12 ತುಂಡುಗಳು ಪತ್ತೆಯಾಗಿದ್ದು, ತಲೆ ಭಾಗದ ದೇಹದ ತುಂಡು ಇನ್ನಷ್ಟೇ ಪತ್ತೆಯಾಗಬೇಕಿದೆ.
ಶ್ರದ್ದಾ ಕೊಲೆಯಾದ ಚತ್ತಾರ್ ಪುರದ ಫ್ಲಾಟ್ ಹಾಗೂ ಆಕೆಯ ದೇಹವನ್ನು ತುಂಡರಿಸಿ ಬಿಸಾಡಿದ್ದ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಇದನ್ನೂ ಓದಿ: ಪ್ರಿಯತಮೆ ಕೊಂದು ತುಂಡರಿಸಿದ ಪ್ರಕರಣ: ಆರೋಪಿಯೊಂದಿಗೆ ಸ್ಥಳ ಮಹಜರು; ಮರಣದಂಡನೆ ವಿಧಿಸಿ- ಶ್ರದ್ದಾಳ ತಂದೆ ಒತ್ತಾಯ
ಈ ವರೆಗೂ ವಶಕ್ಕೆ ಪಡೆಯಲಾಗಿರುವ ಮಾದರಿಗಳನ್ನು ಅವೆಲ್ಲವೂ ಮನುಷ್ಯರದ್ದೇ? ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅವುಗಳನ್ನು ಪರೀಕ್ಷೆಗೆ ಕಳಿಸಲಾಗಿದೆ.
ಮನುಷ್ಯರದ್ದು ಎಂದು ಶಂಕಿಸಲಾಗಿರುವ 12 ತುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು ವಿಧಿವಿಜ್ಞಾನ ತಜ್ಞರಿಗೆ ಕಳಿಸಲಾಗಿದ್ದು, ಅದನ್ನು ಶ್ರದ್ಧಾಳದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಆಕೆಯ ತಂದೆಯ ಡಿಎನ್ಎ ಜೊತೆ ಹೋಲಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ತಲೆಯ ಭಾಗ ಇನ್ನಷ್ಟೇ ಪತ್ತೆಯಾಗಬೇಕಿದೆ.