ದೇಶ

ಬಲಿಷ್ಠ ನಾಯಕತ್ವ ಇಲ್ಲದಿದ್ದರೆ ಅಫ್ತಾಬ್‌ನಂಥವರು ಹುಟ್ಟುತ್ತಲೇ ಇರುತ್ತಾರೆ: ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ!

Srinivasamurthy VN

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣ ಇದೀಗ ಗುಜರಾತ್‌ ಚುನಾವಣೆಯ ವಸ್ತುವಾಗಿದ್ದು, ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ದೇಶಕ್ಕೆ ಬಲಿಷ್ಠ ನಾಯಕ ಇಲ್ಲದೇ ಹೋದರೆ ಅಫ್ತಾಬ್‌ನಂಥವರು ಪ್ರತೀ ನಗರದಲ್ಲಿ ಹುಟ್ಟುತ್ತಾರೆ ಎಂದು ಹೇಳಿದ್ದಾರೆ.

ಗುಜರಾತ್‌ನ ಕಛ್‌ನಲ್ಲಿ ಅವರು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಕ್ಕೆ ಬಲಿಷ್ಠ ನಾಯಕ ಇಲ್ಲದೇ ಹೋದರೆ ಅಫ್ತಾಬ್‌ನಂಥವರು ಪ್ರತೀ ನಗರದಲ್ಲಿ ಹುಟ್ಟುತ್ತಾರೆ. ಅಫ್ತಾಬ್‌, ಶ್ರದ್ಧಾ ಸಹೋದರಿಯನ್ನು ಮುಂಬೈನಿಂದ ಕರೆಸಿ, ಲವ್‌ ಜಿಹಾದ್‌ ಹೆಸರಿನಲ್ಲಿ 35 ತುಂಡು ಮಾಡಿದ. ಬಳಿಕ ಆ ದೇಹವನ್ನು ಫ್ರಿಡ್ಜ್‌ನಲ್ಲಿ ಇಟ್ಟ. ಶ್ರದ್ಧಾಳ ದೇಹ ಫ್ರಿಡ್ಜ್‌ನಲ್ಲಿ ಇರುವಾಗಲೇ, ಇನ್ನೊಬ್ಬಳನ್ನು ಅಲ್ಲಿಗೆ ಕರೆ ತಂದಿದ್ದ ಎಂದು ಹೇಳಿದ್ದಾರೆ.

ಅಂತೆಯೇ, 'ದೇಶಕ್ಕೆ ಒಬ್ಬ ಬಲಿಷ್ಠ ನಾಯಕ ಇಲ್ಲದೇ ಹೋದರೆ, ಯಾರು ದೇಶವನ್ನು ತಾಯಿ ಎಂದು ಪರಿಗಣಿಸುವುದಿಲ್ಲವೋ, ಈ ಥರದ ಅಫ್ತಾಬ್‌ಗಳು ಪ್ರತೀ ಪಟ್ಟಣದಲ್ಲಿ ಹುಟ್ಟುತ್ತಾರೆ. ಹೀಗಾದರೆ ನಮ್ಮ ಸಮಾಜವನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಮತ್ತೆ 2024ರಲ್ಲಿ, ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದು ಮುಖ್ಯ‘ ಎಂದು ಅವರು ಹೇಳಿದ್ದಾರೆ.

ಏನಿದು ಪ್ರಕರಣ?
ಮೇ 18 ರಂದು ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳ ಕತ್ತು ಹಿಸುಕಿ ಕೊಂದು ಹಾಕಿದ್ದು. ಬಳಿಕ ಆಕೆಯ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಮೆಹ್ರೌಲಿ ಫ್ಲಾಟ್‌ನಲ್ಲಿನ ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟಿದ್ದ. ಬಳಿಕ ಶ್ರದ್ಧಾ ನಾಪತ್ತೆ ಪ್ರಕರಣ ಬೇಧಿಸಿದ್ದ ಪೊಲೀಸರು ಫ್ಲಾಟ್ ನಲ್ಲಿ ಕೆಲ ರಕ್ತದ ಕಲೆಗಳನ್ನು ಪತ್ತೆ ಮಾಡಿದ್ದರು. ಬಳಿಕ ಅಫ್ತಾಬ್‌ ನನ್ನು ವಿಚಾರಣೆಗೊಳಪಡಿಸಿದ್ದಾಗ ಆತ ಕೊಲೆ ವಿಚಾರ ಬಾಯಿ ಬಿಟ್ಟಿದ್ದ. ಅಲ್ಲದೆ ಕೊಲೆ ಮಾಡಲು ಉಪಯೋಗಿಸಿದ ಆಯುಧ ಮತ್ತು ಫ್ರಿಡ್ಜ್ ಸೇರಿದಂತೆ ನೆರೆಹೊರೆಯವರು, ಸ್ನೇಹಿತರು ಮತ್ತು ಅಂಗಡಿಕಾರರಿಂದ ಪೊಲೀಸರು ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆದಾಗ್ಯೂ, ಪ್ರಕರಣದ ಕೆಲ ಪ್ರಮುಖ ಪುರಾವೆಗಳು ಇನ್ನೂ ಪತ್ತೆಯಾಗಿಲ್ಲ. ಕೊಲೆಗೆ ಉಪಯೋಗಿಸಿದ ಆಯುಧ, ಸಂತ್ರಸ್ತೆಯ ತಲೆಬುರುಡೆ ಇನ್ನೂ ಸಿಕ್ಕಿಲ್ಲ. ಶ್ರದ್ಧಾಳ ಕತ್ತರಿಸಿದ ತಲೆಯನ್ನು ಅಫ್ತಾಬ್ ತನ್ನ ಫ್ರಿಡ್ಜ್‌ನಲ್ಲಿ ಹಲವಾರು ದಿನಗಳವರೆಗೆ ಇಟ್ಟುಕೊಂಡಿದ್ದನಂತೆ. ರಕ್ತದ ಕಲೆಗಳಿರುವ ತನ್ನ ಮತ್ತು ಶ್ರದ್ಧಾಳ ಬಟ್ಟೆಗಳನ್ನು ಕಸದ ಗಾಡಿಯಲ್ಲಿ ಹಾಕಿರುವುದಾಗಿ ಆತ ಹೇಳಿದ್ದಾನೆ. 

ಶ್ರದ್ಧಾಳ ಮೊಬೈಲ್ ಫೋನ್ ಕೂಡ ನಾಪತ್ತೆಯಾಗಿದೆ. ಪತ್ತೆಯಾದ ಮೂಳೆಗಳ ಡಿಎನ್‌ಎ ಪರೀಕ್ಷೆಯ ಫಲಿತಾಂಶ ಪಡೆಯಲು ವಿಧಿವಿಜ್ಞಾನ ತಂಡಕ್ಕೆ ಸುಮಾರು 15 ದಿನಗಳು ಬೇಕಾಗುತ್ತವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಏತನ್ಮಧ್ಯೆ, ಆರೋಪಿಯು ವಿಚಾರಣೆಯ ಸಮಯದಲ್ಲಿ ತನ್ನ ಹೇಳಿಕೆಗಳನ್ನು ಹಲವು ಬಾರಿ ಬದಲಾಯಿಸಿದ್ದರಿಂದ ಆರೋಪಿಯ ನಾರ್ಕೋ-ಟೆಸ್ಟ್‌ಗೆ ಅನುಮತಿ ಕೋರಿದ್ದಾರೆ. ಆರೋಪಿಯು ಮೂರು ವರ್ಷಗಳ ಹಿಂದೆ ಶ್ರದ್ಧಾಳನ್ನು ಭೇಟಿಯಾಗಿದ್ದ ಸಿಸಿಟಿವಿ ರೆಕಾರ್ಡ್​​ಗಳು, ಕರೆ ದಾಖಲೆಗಳು ಮತ್ತು ಡೇಟಿಂಗ್ ಆ್ಯಪ್ ಬಂಬಲ್ ಮೂಲಕ ಹೆಚ್ಚಿನ ಪುರಾವೆಗಳನ್ನು ಪಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವುದರಿಂದ ತನಿಖೆ ಮುಂದುವರೆದಿದೆ.

ಪೂರ್ವ ದೆಹಲಿಯ ಪ್ರಕರಣದಲ್ಲಿ, ಪತ್ತೆಯಾದ ದೇಹದ ಭಾಗಗಳು ಟ್ಯಾಂಪರ್ ಆಗಿರುವ ಕಾರಣ ಅವು ಯಾರ ದೇಹದ ಭಾಗಗಳಾಗಿವೆ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಪೂರ್ವ ದೆಹಲಿಯಲ್ಲಿ ಪತ್ತೆಯಾದ ದೇಹದ ಭಾಗಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದ್ದು, ಫೊರೆನ್ಸಿಕ್ ವರದಿ ಶೀಘ್ರದಲ್ಲೇ ಬರಲಿದೆ.

SCROLL FOR NEXT