ದೇಶ

ಅಧಿಕಾರದಿಂದ ಕೆಳಗಿಳಿದವರು ಮತ್ತೆ ಅಧಿಕಾರಕ್ಕೆ ಬರಲು ಯಾತ್ರೆ ನಡೆಸುತ್ತಿದ್ದಾರೆ; ರಾಹುಲ್ ವಿರುದ್ಧ ಪ್ರಧಾನಿ ಮೋದಿ

Ramyashree GN

ಸುರೇಂದ್ರನಗರ: ಅಧಿಕಾರದಿಂದ ಹೊರಹಾಕಲ್ಪಟ್ಟವರು ಮತ್ತೆ ಅಧಿಕಾರಕ್ಕೆ ಬರಲು ಯಾತ್ರೆ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ಟೀಕಿಸಿದ್ದಾರೆ.

ಚುನಾವಣೆ ನಡೆಯಲಿರುವ ಗುಜರಾತ್‌ನ ಸುರೇಂದ್ರನಗರ ಪಟ್ಟಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತಯಾರಿಸಿದ ಉಪ್ಪನ್ನು ತಿಂದ ನಂತರವೂ ಕೆಲವರು ಗುಜರಾತ್ ಅನ್ನು ನಿಂದಿಸುತ್ತಾರೆ. ದೇಶದ ಶೇ 80ರಷ್ಟು ಉಪ್ಪನ್ನು ಗುಜರಾತ್ ಉತ್ಪಾದಿಸುತ್ತದೆ ಎಂದು ಹೇಳಿದರು.

ಬಹಳ ಹಿಂದೆಯೇ ಅಧಿಕಾರದಿಂದ ಕೆಳಗಿಳಿದ ಜನರು ಮತ್ತೆ ಅಧಿಕಾರ ಪಡೆಯಲು ಯಾತ್ರೆ ನಡೆಸುತ್ತಿದ್ದಾರೆ. ಅವರು ಯಾತ್ರೆಯನ್ನು ಮಾಡಬಹುದು. ಆದರೆ, ನರ್ಮದಾ ಅಣೆಕಟ್ಟು ಯೋಜನೆಯನ್ನು 40 ವರ್ಷಗಳಿಂದ ಸ್ಥಗಿತಗೊಳಿಸಿದವರ ಜೊತೆ ಅವರು ನಡೆಯುತ್ತಿದ್ದಾರೆ ಎಂದರು.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ಪಾಲ್ಗೊಂಡಿದ್ದನ್ನು ಮೋದಿ ಉಲ್ಲೇಖಿಸಿದ್ದಾರೆ.

ನರ್ಮದಾ ಅಣೆಕಟ್ಟು ಯೋಜನೆಯನ್ನು 40 ವರ್ಷಗಳ ಕಾಲ ಸ್ಥಗಿತಗೊಳಿಸಿದವರನ್ನು ಶಿಕ್ಷಿಸಲು ಗುಜರಾತ್‌ನ ಜನರು ನಿರ್ಧರಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ 'ಔಕತ್' (ಸ್ಥಾನಮಾನ) ಬಗ್ಗೆ  ತೋರಿಸುವುದಾಗಿ ಹೇಳುತ್ತಿದೆ ಎಂದು ಅವರು ಹೇಳಿದರು.

ಈ ಹಿಂದೆ ಕಾಂಗ್ರೆಸ್ ನವರು ‘ನೀಚ್ ಆದ್ಮಿ’, ‘ಮೌತ್ ಕಾ ಸೌದಾಗರ್’, ‘ನಾಲಿ ಕಾ ಕೀಡಾ’ ಅಂತ ಪದಗಳನ್ನು ಬಳಸಿದ್ದರು. ಈಗ ಕಾಂಗ್ರೆಸ್ ನಾಯಕರು ಚುನಾವಣಾ ಸಮಯದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ಮೋದಿಗೆ ಅವರ ಸ್ಥಾನಮಾನವನ್ನು ತೋರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಮೋದಿಗೆ ಯಾವುದೇ ಸ್ಥಾನಮಾನವಿಲ್ಲ, ಅವರು ಜನ ಸೇವಕ' ಎಂದು ಹೇಳಿದರು.

SCROLL FOR NEXT