ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ವೇಳೆ ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿಯೊಂದಿಗೆ ರಾಹುಲ್ ಗಾಂಧಿ 
ದೇಶ

ಮಧ್ಯ ಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ: ಸಮಾಜದಲ್ಲಿನ ದ್ವೇಷ, ಹಿಂಸೆಯ ವಿರುದ್ಧ ನಮ್ಮ ಅಭಿಯಾನ; ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ಬೆಳಗ್ಗೆ ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಬೋದರ್ಲಿ ಗ್ರಾಮವನ್ನು ಪ್ರವೇಶಿಸಿತು. ಈ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೋದರ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ಬೆಳಗ್ಗೆ ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಬೋದರ್ಲಿ ಗ್ರಾಮವನ್ನು ಪ್ರವೇಶಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಅಭಿಯಾನವು ಸಮಾಜದಲ್ಲಿ ಹರಡುತ್ತಿರುವ ದ್ವೇಷ, ಹಿಂಸೆ ಮತ್ತು ಭಯದ ವಿರುದ್ಧವಾಗಿದೆ ಎಂದರು.

ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದಿದ್ದ ಅಪಾರ ಸಂಖ್ಯೆಯ ಕಾಂಗ್ರೆಸ್ಸಿಗರು ಬೋದರ್ಲಿಗೆ ಆಗಮಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ರಾಜ್ಯದಲ್ಲಿ 12 ದಿನಗಳ ಕಾಲ ನಡೆಯಲಿರುವ ಸುದೀರ್ಘ ಯಾತ್ರೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲು, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಮಧ್ಯಪ್ರದೇಶ ಪಕ್ಷದ ಮುಖ್ಯಸ್ಥ ಕಮಲ್ ನಾಥ್ ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿದರು. ಯಾತ್ರೆ ರಾಜಸ್ಥಾನಕ್ಕೆ ಪ್ರವೇಶಿಸುವ ಮೊದಲು ರಾಜ್ಯದಲ್ಲಿ 380 ಕಿ.ಮೀ. ಕ್ರಮಿಸಲಿದೆ.

ಹಣ್ಣಿನ ಕೃಷಿಗೆ ಹೆಸರುವಾಸಿಯಾಗಿರುವ ಹಾಗೂ ಸುಮಾರು 6,000 ಜನಸಂಖ್ಯೆಯನ್ನು ಹೊಂದಿರುವ ಬೋದರ್ಲಿ ಗ್ರಾಮವನ್ನು ಬಾಳೆ ಎಲೆಗಳಿಂದ ಅಲಂಕರಿಸಲಾಗಿತ್ತು.

ಮಧ್ಯಪ್ರದೇಶಕ್ಕೆ ಆಗಮಿಸಿದ ಯಾತ್ರೆಗೆ ಜನಪದ ಕಲಾವಿದರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಈ ಯಾತ್ರೆಯು ದೇಶದಲ್ಲಿ ಹರಡುತ್ತಿರುವ ದ್ವೇಷ, ಹಿಂಸೆ ಮತ್ತು ಭಯದ ವಿರುದ್ಧವಾಗಿದೆ. ನಾವು ಕನ್ಯಾಕುಮಾರಿಯಿಂದ ತ್ರಿವರ್ಣ ಧ್ವಜವನ್ನು ನಮ್ಮ ಕೈಯಲ್ಲಿ ಹಿಡಿದುಕೊಂಡು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ. ಈ ತ್ರಿವರ್ಣ ಧ್ವಜವು ಶ್ರೀನಗರ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಹೇಳಿದರು.

ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ ಗಾಂಧಿ, 'ಬಿಜೆಪಿಯು ಯುವಕರು, ರೈತರು ಮತ್ತು ಕಾರ್ಮಿಕರ ಮನಸ್ಸಿನಲ್ಲಿ ಮೊದಲು ಭಯವನ್ನು ಹರಡುತ್ತದೆ. ಭಯ ತುಂಬಿದಾಗ ಅವರು ಅದನ್ನು ಹಿಂಸಾಚಾರವಾಗಿ ಪರಿವರ್ತಿಸುತ್ತಾರೆ' ಎಂದು ಆರೋಪಿಸಿದರು.
ಅವರು ಅಲ್ಲಿ ನೆರೆದಿದ್ದ ಗ್ರಾಮದ ಐದು ವರ್ಷದ ಬಾಲಕ ರುದ್ರನನ್ನು ವೇದಿಕೆಗೆ ಕರೆತಂದರು. ಬಳಿಕ ಭವಿಷ್ಯದಲ್ಲಿ ಏನಾಗಬೇಕೆಂದು ಅಂದುಕೊಂಡಿರುವ ಬಗ್ಗೆ ಕೇಳಿದರು. ಅದಕ್ಕೆ ಮಗು ತಾನು ವೈದ್ಯನಾಗಬೇಕೆಂದು ಹೇಳಿತು.

'ಸದ್ಯ ಭಾರತದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಪೋಷಕರು ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗಿರುವುದರಿಂದ ರುದ್ರ ಅವರ ಕನಸನ್ನು ನನಸಾಗಿಸುವುದು ಕಷ್ಟಕರವಾಗಿದೆ. ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ, ಆತನು ಕಾರ್ಮಿಕನಾಗಿ ಕೆಲಸ ಮಾಡಬೇಕಾಗುತ್ತದೆ' ಎಂದು ದೇಶದಲ್ಲಿ ಬೆಳೆಯುತ್ತಿರುವ ಶಿಕ್ಷಣದ ಖಾಸಗೀಕರಣದ ಪ್ರವೃತ್ತಿಯನ್ನು ಗುರಿಯಾಗಿಸಿದರು.

'ಕೈಗಾರಿಕೆಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳು ದೇಶದಲ್ಲಿ ಕೇವಲ ಮೂರ್ನಾಲ್ಕು ಕೈಗಾರಿಕೋದ್ಯಮಿಗಳ ಕೈಯಲ್ಲಿವೆ. ರೈಲ್ವೆ ಕೂಡ ಅವರ ಕೈಗೆ ಹೋಗುತ್ತಿದೆ. ಇದು ಅನ್ಯಾಯದ ಭಾರತ ಮತ್ತು ಅಂತಹ ಭಾರತ ನಮಗೆ ಬೇಡ. ಬೆಲೆ ಬಾಳುವ ಪೆಟ್ರೋಲ್ ಮತ್ತು ಅಡುಗೆ ಅನಿಲ ಖರೀದಿಗಾಗಿ ಜನಸಾಮಾನ್ಯರ ಜೇಬಿನಿಂದ ಹೊರ ಹೋಗುವ ಹಣ ಈ ಮೂರ್ನಾಲ್ಕು ಕೈಗಾರಿಕೋದ್ಯಮಿಗಳ ಜೇಬಿಗೆ ಸೇರುತ್ತಿದೆ' ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ಯಾತ್ರೆಯನ್ನು ಸ್ವಾಗತಿಸಿದ ಕಮಲ್ ನಾಥ್, ಇದು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಲಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಮಧ್ಯ ಪ್ರದೇಶದ ವಿಧಾನಸಭೆ ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್, ಮಾಜಿ ಕೇಂದ್ರ ಸಚಿವರಾದ ಸುರೇಶ್ ಪಚೌರಿ ಮತ್ತು ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel