ದೇಶ

ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣ: ಬಿಎಲ್ ಸಂತೋಷ್ ಆರೋಪಿ; ಎಸ್ಐಟಿಯಿಂದ ಮತ್ತೆ ನೋಟಿಸ್

Lingaraj Badiger

ಹೈದರಾಬಾದ್: ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ಮತ್ತು ಇತರ ಮೂವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಆರೋಪಿಗಳೆಂದು ಹೆಸರಿಸಿರುವುದಾಗಿ ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣ ಹೈಕೋರ್ಟ್‌ನ ನಿರ್ದೇಶನದ ನಂತರ, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಸಂತೋಷ್‌ ಅವರಿಗೆ ಎರಡನೇ ನೋಟಿಸ್ ಜಾರಿ ಮಾಡಿದೆ.

ಹೊಸ ನೋಟಿಸ್‌ನಲ್ಲಿ, ನವೆಂಬರ್ 26 ಅಥವಾ ನವೆಂಬರ್ 28 ರಂದು ವಿಚಾರಣೆಗಾಗಿ ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.

ಈವರೆಗಿನ ತನಿಖೆಯ ಆಧಾರದ ಮೇಲೆ ಎಸ್‌ಐಟಿ ಇಲ್ಲಿನ ವಿಶೇಷ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದು, ಅದರಲ್ಲಿ ಸಂತೋಷ್ ಮತ್ತು ಕೇರಳದ ಇಬ್ಬರು ವ್ಯಕ್ತಿಗಳಾದ ಜಗ್ಗು ಸ್ವಾಮಿ ಮತ್ತು ತುಷಾರ್ ವೆಲ್ಲಪಲ್ಲಿ, ಬಿ ಶ್ರೀನಿವಾಸ್ ಅವರನ್ನು ಪ್ರಕರಣದ ಆರೋಪಿಗಳೆಂದು ಸೇರಿಸಿದೆ.

ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬ ಮೂವರನ್ನು ಈಗಾಗಲೇ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿತ್ತು.

ಟಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರು ಅಕ್ಟೋಬರ್ 26 ರಂದು ನಾಲ್ವರು ಶಾಸಕರ ಖರೀದಿ ಸಂಬಂಧ  ದೂರು ದಾಖಲಿಸಿದ್ದಾರೆ.

SCROLL FOR NEXT