ದೇಶ

15 ವರ್ಷ ಹಳೆಯ ಎಲ್ಲ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವುದು: ಕೇಂದ್ರ ಸಚಿವ ಗಡ್ಕರಿ

Lingaraj Badiger

ನಾಗಪುರ: 15 ವರ್ಷ ಪೂರೈಸಿದ ಭಾರತ ಸರ್ಕಾರಕ್ಕೆ ಸೇರಿದ ಎಲ್ಲಾ ವಾಹನಗಳನ್ನು ಗುಜರಿ(ಸ್ಕ್ರ್ಯಾಪ್‌) ಹಾಕಲಾಗುವುದು ಮತ್ತು ಆ ನಿಟ್ಟಿನಲ್ಲಿ ಸ್ಕ್ರ್ಯಾಪ್‌ ನೀತಿಯನ್ನು ರಾಜ್ಯಗಳಿಗೂ ಕಳುಹಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಹೇಳಿದ್ದಾರೆ.

ನಾಗಪುರದಲ್ಲಿ ವಾರ್ಷಿಕ ಕೃಷಿ-ವಿಷನ್, ಕೃಷಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಗಡ್ಕರಿ, 'ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ 15 ವರ್ಷ ಪೂರೈಸಿರುವ ಕೇಂದ್ರ ಸರ್ಕಾರ ಎಲ್ಲ ವಾಹನಗಳನ್ನು ಸ್ಕ್ರ್ಯಾಪ್‌ ಮಾಡುವ ಕಡತಕ್ಕೆ ಸಹಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಈ ನೀತಿಯನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿದ್ದೇನೆ. ಅವರು ಇದನ್ನು ಅಳವಡಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.

ಪಾಣಿಪತ್‌ನಲ್ಲಿ ಇಂಡಿಯನ್ ಆಯಿಲ್‌ನ ಎರಡು ಸ್ಥಾವರಗಳು ಬಹುತೇಕ ಪ್ರಾರಂಭವಾಗಿದ್ದು, ಅದರಲ್ಲಿ ಒಂದು ದಿನಕ್ಕೆ ಒಂದು ಲಕ್ಷ ಲೀಟರ್ ಎಥೆನಾಲ್ ಅನ್ನು ಉತ್ಪಾದಿಸುತ್ತದೆ ಮತ್ತು ಇನ್ನೊಂದು ದಿನಕ್ಕೆ 150 ಟನ್ ಬಯೋ-ಬಿಟುಮೆನ್ ಅನ್ನು ಭತ್ತದ ಹುಲ್ಲು ಬಳಸಿ ತಯಾರಿಸುತ್ತದೆ ಎಂದು ತಿಳಿಸಿದರು.

"ಇದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ದೇಶದ ಅಕ್ಕಿ ಉತ್ಪಾದಿಸುವ ಭಾಗಗಳಲ್ಲಿ ದೊಡ್ಡ ಬದಲಾವಣೆ ತರಲಿದೆ. ಅಲ್ಲಿ ಭತ್ತದ ಹುಲ್ಲು ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ. ಈಗ, ಎಥೆನಾಲ್ ಮತ್ತು ಜೈವಿಕ ಬಿಟುಮೆನ್ ಉತ್ಪಾದಿಸಲು ಅಕ್ಕಿ ಹುಲ್ಲು ಬಳಸವುದರಿಂದ ವಾಯು ಮಾಲಿನ್ಯ ತಡೆಯಬಹುದು" ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

SCROLL FOR NEXT