ದೇಶ

ಗುಜರಾತ್ ಮಾದರಿ ಎಂದರೆ 4 ಲಕ್ಷ ಕೋವಿಡ್ ಸಾವು: ಮಲ್ಲಿಕಾರ್ಜುನ ಖರ್ಗೆ

Lingaraj Badiger

ಅಹಮದಾಬಾದ್: "ಗುಜರಾತ್ ಮಾದರಿ" ಎಂದರೆ ಸುಮಾರು 4 ಲಕ್ಷ ಕೋವಿಡ್-19 ಸಾವುಗಳು. ಬಿಜೆಪಿ ಆರು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ. ಇದರರ್ಥ ನೀವು ಇಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಸಿಎಂಗಳು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಅವರನ್ನು ಬದಲಾಯಿಸಲು ಯಾವುದೇ ಕಾರಣವಿರಲಿಲ್ಲ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತಮ್ಮ ಪಕ್ಷ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದೆ ಎಂದು ತಿರುಗೇಟು ನೀಡಿದರು.

ಭಾರತೀಯ ಜನತಾ ಪಕ್ಷದ ಯಾವುದೇ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆಯೇ ಎಂದು ಶ್ನಿಸಿದ ಖರ್ಗೆ,   “ಭಯೋತ್ಪಾದಕರ ವಿರುದ್ಧ ಹೋರಾಡುವ ಕೆಲಸವನ್ನು ನಾವು ಮಾಡಿದ್ದೇವೆ, ದೇಶದಲ್ಲಿ ಶಾಂತಿ ಕಾಪಾಡಲು ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ದೇಶವನ್ನು ಒಗ್ಗೂಡಿಸಲು ಇಂದಿರಾಗಾಂಧಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ದೇಶದ ಐಕ್ಯತೆಗಾಗಿ ರಾಜೀವ್ ಗಾಂಧಿ ಹುತಾತ್ಮರಾದರು. ಬಿಜೆಪಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕ ಇದ್ದಾರೆಯೇ? ಎಂದು ಪ್ರಶ್ನಿಸಿದರು.

"ದೇಶವನ್ನು ಬಲಪಡಿಸಲು ಮತ್ತು ಒಗ್ಗೂಡಿಸಲು ಕಾಂಗ್ರೆಸ್ ಇಬ್ಬರು ಪ್ರಸಿದ್ಧ ಮತ್ತು ವಿಶ್ವ ಗೌರವಾನ್ವಿತ ಪ್ರಧಾನಿಗಳನ್ನು ಕಳೆದುಕೊಂಡಿದೆ. ಆದರೆ ಇದು ರಾಜ್ಯ ವಿಧಾನಸಭೆಯ ಚುನಾವಣೆಯಾಗಿದೆ ಮತ್ತು ಸಂಸತ್ತಿನ ಚುನಾವಣೆಯಲ್ಲ. ರಾಜ್ಯವನ್ನು ಬಾಧಿಸುವ ಸಮಸ್ಯೆಗಳೊಂದಿಗೆ ನಾವು ನಿಮ್ಮ ಮುಂದೆ ಬಂದಿದ್ದೇವೆ. ಅವರು (ಮೋದಿ) ರಾಜ್ಯದ ಅಭಿವೃದ್ಧಿ ಮತ್ತು ವೈಫಲ್ಯಗಳ ಬಗ್ಗೆ ಮಾತನಾಡಿದರೆ ಉತ್ತಮ ಎಂದು ಖರ್ಗೆ ಹೇಳಿದರು.

ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಿಜೆಪಿಯ ಚುನಾವಣಾ ಭರವಸೆಯ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಇದು ಸಮಾಜವನ್ನು ವಿಭಜಿಸುವ ಮತ್ತು ಮತಕ್ಕಾಗಿ ವಿವಾದವನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.

SCROLL FOR NEXT