ದೇಶ

ದೆಹಲಿ ಅಬಕಾರಿ ನೀತಿ: ಇಡಿ ದಾಳಿ ನಂತರ ರೂ.1 ಕೋಟಿ ನಗದು ವಶಕ್ಕೆ 

Nagaraja AB

ನವದೆಹಲಿ: ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತ ಅಕ್ರಮ ಹಣ ವರ್ಗಾವಣೆ ತನಿಖೆ ಸಂಬಂಧ ನಡೆದ ದಾಳಿಯ ನಂತರ ಇಡಿ  ಸುಮಾರು 1 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. 

ದೆಹಲಿ-ಎನ್ ಸಿಆರ್, ಪಂಜಾಬ್ ಮತ್ತು ತೆಲಂಗಾಣದ ರಾಜಧಾನಿ ಹೈದರಾಬಾದಿನ 35 ಕಡೆಗಳಲ್ಲಿ ಶುಕ್ರವಾರ ಇಡಿ ಶೋಧ ಕಾರ್ಯಾಚರಣೆ ನಡೆಸಿತು. ಲಿಕ್ಕರ್ ವ್ಯಾಪಾರಿಗಳು, ವಿತರಣಾ ಕಂಪನಿಗಳು ಮತ್ತು ಅವುಗಳೊಂದಿಗೆ ಸಂಪರ್ಕ ಹೊಂದಿದ್ದ ಸಂಸ್ಥೆಗಳ ವಿರುದ್ಧ ನಡೆಸಿದ ದಾಳಿ ವೇಳೆಯಲ್ಲಿ ಕೋಟ್ಯಂತರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.

ಕೆಲವು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. ಆದರೆ, ಇವುಗಳನ್ನು ವಶಕ್ಕೆ ಪಡೆದ ಸ್ಥಳಗಳ ಹೆಸರನ್ನು ಮಾತ್ರ  ಬಹಿರಂಗಪಡಿಸಿಲ್ಲ.

ವಿವಿಧ ಆಲ್ಕೋಹಾಲಿಕ್ ಬೇವರಿಜ್ ಆಮದು ಮತ್ತು ರಫ್ತು ಮಾಡುತ್ತಿದ್ದ ಕಂಪನಿಯೊಂದರ ನಗರದ  ಉದ್ಯಮಿ, ದೆಹಲಿ ಮೂಲದ ಟಿವಿ ವಾಹಿನಿಯೊಂದರ ನಿರ್ದೇಶಕರು ಹಾಗೂ ಪಂಜಾಬಿನ ಮಾಜಿ  ಶಾಸಕರೊಬ್ಬರಿಗೆ ಸೇರಿದ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

 ಇಡಿ ಈವರೆಗೂ 103 ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಮತ್ತಿತರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. 

SCROLL FOR NEXT