ದೇಶ

20-30 ಟಿಆರ್‌ಎಸ್ ಶಾಸಕರನ್ನು ಖರೀದಿಸಿ, ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ: ಸಿಎಂ ಚಂದ್ರಶೇಖರ್ ರಾವ್

Vishwanath S

ಹೈದರಾಬಾದ್: ಆಡಳಿತಾರೂಢ ಟಿಆರ್‌ಎಸ್‌ನ 20 ಅಥವಾ 30 ಶಾಸಕರನ್ನು ಖರೀದಿಸಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆರೋಪಿಸಿದ್ದಾರೆ. 

ಉಪಚುನಾವಣೆ ನಡೆಯಲಿರುವ ಮುನುಗೋಡು ಭಾಗದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ರಾವ್, ದೆಹಲಿಯ 'ದಲ್ಲಾಳಿಗಳು' ಹಾಲಿ ಶಾಸಕರಿಗೆ ತಲಾ 100 ಕೋಟಿ ರೂಪಾಯಿ ಆಮಿಷ ತೋರಿಸಿದ್ದು ಇದಕ್ಕೆ 'ಮಣ್ಣಿನ ಮಕ್ಕಳು' ಶಾಸಕರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ಹೇಳಿದರು.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಟಿಆರ್ಎಸ್ ಶಾಸಕರು 100 ಕೋಟಿ ರೂಪಾಯಿ ಮೌಲ್ಯದವರಲ್ಲ ಎಂದು ಹೇಳಿದ್ದು, ಟಿಆರ್‌ಎಸ್ ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದೆ.

ನಾಲ್ವರು ಟಿಆರ್‌ಎಸ್ ಶಾಸಕರನ್ನು ಸೆಳೆಯಲು ಯತ್ನಿಸಿದ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಒಂದು ದಿನದ ನಂತರ ಚಂದ್ರಶೇಖರ್ ರಾವ್ ಈ ಹೇಳಿಕೆ ನೀಡಿದ್ದಾರೆ.

ಟಿಆರ್‌ಎಸ್ ಶಾಸಕರಲ್ಲಿ ಒಬ್ಬರಾದ ಪಿ ರೋಹಿತ್ ರೆಡ್ಡಿ ಅವರ ದೂರಿನ ಆಧಾರದ ಮೇಲೆ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ವಿರುದ್ಧ ಕ್ರಿಮಿನಲ್ ಪಿತೂರಿ, ಲಂಚ ನೀಡುವಿಕೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

SCROLL FOR NEXT