ನವದೆಹಲಿ: ಗುಜರಾತ್ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ಕುಸಿದು ಬಿದ್ದ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸೋಮವಾರ ಒತ್ತಾಯಿಸಿದೆ.
ದುರಂತದ ಎಲ್ಲಾ ಸಂತ್ರಸ್ತರಿಗೆ ಸರ್ಕಾರದಿಂದ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುವಂತೆ ವಿರೋಧ ಪಕ್ಷವು ಆಗ್ರಹಿಸಿದೆ.
ಸೇತುವೆ ಕುಸಿದು 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 177ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಐದು ದಿನಗಳ ಹಿಂದಷ್ಟೇ ದುರಸ್ತಿ ಮತ್ತು ನವೀಕರಣದ ನಂತರ ಪುನರಾರಂಭಗೊಂಡ ಶತಮಾನಕ್ಕೂ ಹೆಚ್ಚು ಹಳೆಯದಾದ ಸೇತುವೆ ಭಾನುವಾರ ಸಂಜೆ ಕುಸಿದಾಗ ಜನರಿಂದ ಕಿಕ್ಕಿರಿದು ತುಂಬಿತ್ತು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.
ಇದನ್ನೂ ಓದಿ: ಗುಜರಾತ್ ಸೇತುವೆ ದುರಂತ ಪ್ರಕರಣ: ಮೃತರ ಸಂಖ್ಯೆ 141ಕ್ಕೆ ಏರಿಕೆ; ಹಲವರು ನಾಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಐದು ದಿನಗಳ ಹಿಂದಷ್ಟೇ ತೆರೆಯಲಾದ ಸೇತುವೆ ಕುಸಿದಿರುವುದಕ್ಕೆ ಕಾರಣವೇನು ಎಂಬುದು ತಿಳಿಯಬೇಕಿದೆ. ಇಷ್ಟೊಂದು ಮಂದಿಗೆ ಏಕೆ ಅವಕಾಶ ನೀಡಲಾಯಿತು. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಖರ್ಗೆ ಒತ್ತಾಯಿಸಿದರು.
ಅಲ್ಲದೆ, ಸಂತ್ರಸ್ತರಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಎಲ್ಲಾ ನೆರವು ನೀಡಬೇಕು ಮತ್ತು ಪರಿಹಾರ ನೀಡಬೇಕು. ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಸರ್ಕಾರದಿಂದ ಎಲ್ಲ ನೆರವು ನೀಡಬೇಕು ಎಂದು ಅವರು ಹೇಳಿದರು.
'ನಮ್ಮ (ಕಾಂಗ್ರೆಸ್) ನಾಯಕರು ಅಲ್ಲಿಗೆ ತಲುಪಿದ್ದಾರೆ. ಅಶೋಕ್ ಗೆಹ್ಲೋಟ್ ಕೂಡ ತಲುಪುತ್ತಿದ್ದಾರೆ. ನಾವು ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಈ ಸಮಯದಲ್ಲಿ ನಾವು ಯಾವುದೇ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಅಥವಾ ಯಾರನ್ನೂ ದೂಷಿಸಲು ಬಯಸುವುದಿಲ್ಲ. ತನಿಖೆಯ ವರದಿ ಬಂದ ನಂತರವೇ ದೂಷಿಸಬಹುದು' ಎಂದರು.
ಇತ್ತೀಚಿನ ಮಾಹಿತಿ ಪ್ರಕಾರ, ದುರಂತದಲ್ಲಿ 132 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ. ಬ್ರಿಟಿಷರ ಕಾಲದ ತೂಗು ಸೇತುವೆ ಮೇಲೆ ಹಲವಾರು ಮಹಿಳೆಯರು ಮತ್ತು ಮಕ್ಕಳು ಇದ್ದರು. ಅದು ಒಡೆದು ಕೆಳಗಿರುವ ನೀರಿನಲ್ಲಿ ಮುಳುಗಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೆಲವರು ಸೇತುವೆಯ ಮೇಲೆ ಹಾರಿ ಅದರ ದೊಡ್ಡ ತಂತಿಗಳನ್ನು ಎಳೆಯುತ್ತಿರುವುದು ಕಂಡುಬಂದಿದೆ. ಅದರ ಮೇಲಿದ್ದ ಹೆಚ್ಚಿನ ಜನಸಂದಣಿಯಿಂದಾಗಿ ಸೇತುವೆ ಕುಸಿದಿರಬಹುದು ಎಂದು ಮತ್ತೋರ್ವ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.