ಲಖೀಮ್ ಪುರ್ ಖೇರಿ: ಉತ್ತರ ಪ್ರದೇಶದ ಲಖೀಮ್ ಪುರ್ ಖೇರಿಯಲ್ಲಿ ದಲಿತ ಸಹೋದರಿಯರಿಬ್ಬರ ಸಾವು ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಪ್ರಕಟಗೊಂಡಿದ್ದು, ಅತ್ಯಾಚಾರವೆಸಗಿ, ಕತ್ತು ಹಿಸುಕಿರುವುದು ದೃಢಪಟ್ಟಿದೆ.
ಎಸ್ ಪಿ ಸಂಜೀವ್ ಸುಮನ್ ಎಎನ್ಐ ಜೊತೆ ಮಾತನಾಡಿದ್ದು, ವರದಿಯನ್ನು ಉಲ್ಲೇಖಿಸಿ ಅತ್ಯಾಚಾರವೆಸಗಿದ ಬಳಿಕ ಬಾಲಕಿಯರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಲಖೀಮ್ ಪುರ್ ಖೇರಿಯಲ್ಲಿ ಬುಧವಾರ (ಸೆ.14 ರಂದು) ಇಬ್ಬರು ಯುವತಿಯರ ಶರೀರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಘಟನೆ ಬೆಳಕಿಗೆ ಬಂದೊಡನೆ, ತೀವ್ರ ಪ್ರತಿಭಟನೆಗಳಾಗಿದ್ದು, ಬಾಲಕಿಯರ ತಂದೆ ಮಕ್ಕಳ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆ ನಡೆಯಲು ಕಾರಣರಾದವರನ್ನು ಗಲ್ಲಿಗೇರಿಸಬೇಕೆಂದು ಸಂತ್ರಸ್ತೆಯರ ಪೋಷಕರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಕುಟುಂಬ ಸದಸ್ಯರಿಗೆ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಲಖಿಂಪುರ್ ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಅಪ್ರಾಪ್ತ ಸೋದರಿಯರ ಶವ ಪತ್ತೆ
ನನ್ನ ಮಕ್ಕಳನ್ನು ಮನೆಯಿಂದ ಎಳೆದೊಯ್ದು, ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.