ದೇಶ

ಎಎಪಿಗೆ ಕವರೇಜ್ ನೀಡದಂತೆ ಸುದ್ದಿ ವಾಹಿನಿ ಸಂಪಾದಕರಿಗೆ ಪ್ರಧಾನಿ ಮೋದಿ ಸಲಹೆಗಾರರಿಂದ ಎಚ್ಚರಿಕೆ: ಕೇಜ್ರಿವಾಲ್

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಗುಜರಾತ್ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕೇಸರಿ ಪಕ್ಷ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಎಎಪಿಯನ್ನು "ನಾಶ ಮಾಡಲು" ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳ ಮೊದಲ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೋದಿ ಸರ್ಕಾರ ನಮ್ಮ ಪಕ್ಷದ ಸಚಿವರು ಮತ್ತು ಮುಖಂಡರನ್ನು ಸುಳ್ಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ. ಏಕೆಂದರೆ ಬಿಜೆಪಿಗೆ "ಗುಜರಾತ್ ನಲ್ಲಿ ಹೆಚ್ಚುತ್ತಿರುವ ಎಎಪಿಯ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಎಎಪಿಯ ಪ್ರಭಾವ ಹೆಚ್ಚುತ್ತಿದ್ದು, ಇದರಿಂದ ಬಿಜೆಪಿ ಎಷ್ಟು ನೊಂದುಕೊಂಡಿದೆಯೆಂದರೆ "ಪ್ರಧಾನಿ ಸಲಹೆಗಾರ ಹಿರೇನ್ ಜೋಶಿ ಅವರು ಗುಜರಾತ್‌ನಲ್ಲಿ ಎಎಪಿ ಪಕ್ಷಕ್ಕೆ ಕವರೇಜ್ ನೀಡಬೇಡಿ. ಎಎಪಿ ಸುದ್ದಿ ಪ್ರಕಟಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹಲವಾರು ಟಿವಿ ಚಾನೆಲ್‌ಗಳ ಮಾಲೀಕರು ಮತ್ತು ಅದರ ಸಂಪಾದಕರಿಗೆ ಎಚ್ಚರಿಕೆ ನೀಡಿದ್ದಾರೆ" ಆಪ್ ರಾಷ್ಟ್ರೀಯ ಸಂಚಾಲಕರು ಆರೋಪಿಸಿದ್ದಾರೆ.

ಕೇಜ್ರಿವಾಲ್ ಅವರ ಆರೋಪಕ್ಕೆ ಪ್ರಧಾನಿ ಕಚೇರಿ ಅಥವಾ ಜೋಶಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

"ನೀವು ಎಎಪಿಗೆ ಕವರೇಜ್ ನೀಡುವುದನ್ನು ನಿಲ್ಲಿಸಿ ಎಂದು ಎಚ್ಚರಿಸಿದ್ದಾರೆ. ಈ ಸಂಪಾದಕರು ಜೋಶಿ ಅವರ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡರೆ, ಪ್ರಧಾನಿ ಮತ್ತು ಅವರ ಸಲಹೆಗಾರ ಇಬ್ಬರೂ ದೇಶಕ್ಕೆ ತಮ್ಮ ಮುಖ ತೋರಿಸುವ ಸ್ಥಿತಿಯಲ್ಲಿರುವುದಿಲ್ಲ" ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT