ದೇಶ

ಖಾತ ಹಾಸ್ಯನಟ ರಾಜು ಶ್ರೀವಾಸ್ತವ ನಿಧನಕ್ಕೆ ಪ್ರಧಾನಿ ಮೋದಿ, ರಾಜನಾಥ್ ಸಿಂಗ್ ಸಂತಾಪ

Lingaraj Badiger

ನವದೆಹಲಿ: ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದು, ಅವರು 'ನಮ್ಮ ಜೀವನವನ್ನು ನಗು, ಹಾಸ್ಯ ಮತ್ತು ಸಕಾರಾತ್ಮಕತೆಯಿಂದ ಬೆಳಗಿಸಿದ್ದಾರೆ' ಎಂದು ಹೇಳಿದ್ದಾರೆ.

ರಾಜು ಶ್ರೀವಾಸ್ತವ ಅವರು ಆಗಸ್ಟ್ 10 ರಂದು ಹೋಟೆಲ್‌ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ತಕ್ಷಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಂಜಿಯೋಪ್ಲಾಸ್ಟಿಗೆ ಒಳಪಡಿಸಲಾಯಿತು. ಅಂದಿನಿಂದ ವೆಂಟಿಲೇಟರ್‌ ನಲ್ಲಿದ್ದ ಹಾಸ್ಯನಟ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

"ರಾಜು ಶ್ರೀವಾಸ್ತವ ನಮ್ಮ ಜೀವನವನ್ನು ನಗು, ಹಾಸ್ಯ ಮತ್ತು ಸಕಾರಾತ್ಮಕತೆಯಿಂದ ಬೆಳಗಿಸಿದರು. ಅವರು ನಮ್ಮನ್ನು ಬೇಗನೆ ಅಗಲಿದರು. ಆದರೆ ಹಲವಾರು ವರ್ಷಗಳ ಅವರ ಶ್ರೀಮಂತ ಕೆಲಸಕ್ಕೆ ಧನ್ಯವಾದಗಳು, ಅವರು ಅಸಂಖ್ಯಾತ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ನಿಧನ ದುಃಖಕರವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ" ಎಂದು ಪ್ರಧಾನಿ ಮೋದಿ ಅವರು ಹಾಸ್ಯನಟನ ಜೊತೆ ತಾವು ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಹಾಸ್ಯನಟ ರಾಜು ಶ್ರೀವಾಸ್ತವ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

SCROLL FOR NEXT