ದೇಶ

2024 ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾವಣೆಗೆ ಎಲ್ಲರೂ ಶ್ರಮಿಸಬೇಕು- ವಿಪಕ್ಷ ನಾಯಕರ ರ‍್ಯಾಲಿಯಲ್ಲಿ ಶರದ್ ಪವಾರ್ 

Nagaraja AB

ಫತೇಹಾಬಾದ್: 2024 ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಕೆಲಸ ಮಾಡುವ ಸಮಯ ಬಂದಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದ್ದಾರೆ.

ಭಾರತೀಯ ರಾಷ್ಟ್ರೀಯ ಲೋಕದಳ ಆಯೋಜಿಸಿದ್ದ ವಿಪಕ್ಷಗಳ ಮುಖಂಡರ ಮೆಗಾ ರ‍್ಯಾಲಿಯಲ್ಲಿ, ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಉಲ್ಲೇಖಿಸಿದ ಪವಾರ್, ರೈತರ ಆತ್ಮಹತ್ಯೆ ಪರಿಹಾರವಲ್ಲ ಮತ್ತು ಸರ್ಕಾರದಲ್ಲಿ ಬದಲಾವಣೆ ತರುವುದು ನಿಜವಾದ ಪರಿಹಾರವಾಗಿದೆ ಎಂದು ಹೇಳಿದರು.

ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು, ಆದರೆ ಕೇಂದ್ರ ಸರ್ಕಾರ ಬಹಳ ದಿನಗಳಿಂದ ಅವರ ಬೇಡಿಕೆಗಳಿಗೆ ಗಮನ ಕೊಡಲಿಲ್ಲ. ರೈತರು ಮತ್ತು ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ, ಆದರೆ ಬದಲಾವಣೆ ತರುವುದೇ ನಿಜವಾದ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ  2024 ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾವಣೆಗೆ ಎಲ್ಲರೂ ಶ್ರಮಿಸಬೇಕು ಎಂದರು.  ಕೇಂದ್ರ ಸರ್ಕಾರ  ರೈತ  ಮುಖಂಡರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದೆ. ಆದರೆ ಇದುವರೆಗೂ ಈಡೇರಿಲ್ಲ ಎಂದು ಪವಾರ್ ಹೇಳಿದರು.

ಇದೇ  ರ‍್ಯಾಲಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಗ್ಗೂಡಲು ಕರೆ ನೀಡಿದರು. ಈ ವಿಪಕ್ಷಗಳ ಕೂಟವು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು  ಹೀನಾಯವಾಗಿ ಸೋಲಿಸಲಿದೆ ಎಂದು ಹೇಳಿದರು. ತಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದರು. 

ತೃತೀಯ ರಂಗದ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್ ಸೇರಿದಂತೆ ಒಂದು ರಂಗ ಇರಬೇಕು, ಆಗ ನಾವು 2024 ರಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ಅವರು ಹೇಳಿದರು. ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಬೆಲೆ ಏರಿಕೆ ವಿಷಯ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

SCROLL FOR NEXT