ದೇಶ

ಉತ್ತರ ಪ್ರದೇಶ: ಟ್ರಾಕ್ಟರ್ ಪಲ್ಟಿಯಾಗಿ 10 ಮಂದಿ ದುರ್ಮರಣ, 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಯೋಗಿ

Lingaraj Badiger

ಲಖನೌ: ಸೀತಾಪುರದಿಂದ 47 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ - ಟ್ರಾಲಿ ಪಲ್ಟಿಯಾಗಿ ಕೊಳಕ್ಕೆ ಬಿದ್ದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ ಘಟನೆ ಸೋಮವಾರ ಉತ್ತರ ಪ್ರದೇಶದ ಲಖನೌ ಸಮೀಪ ನಡೆದಿದೆ.

ಕೊಳದಲ್ಲಿ ಬಿದ್ದ ಇನ್ನೂ 37 ಜನರನ್ನು ರಕ್ಷಿಸಲಾಗಿದ್ದು, ಇಟೌಂಜಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಖನೌ ಕುಮ್ರಾವಾನ್ ರಸ್ತೆಗೆ ಹೋಗುವ ಮಾರ್ಗದಲ್ಲಿ ಇಟೌಂಜಾ ಪ್ರದೇಶದ ಮುಖ್ಯ ರಸ್ತೆಯಿಂದ ಟ್ರ್ಯಾಕ್ಟರ್-ಟ್ರಾಲಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.

ಮೃತಪಟ್ಟವರಲ್ಲಿ ಇಬ್ಬರು ಹದಿಹರೆಯದ ಹುಡುಗಿಯರು ಸೇರಿದಂತೆ ಹಲವಾರು ಮಹಿಳೆಯರು ಸೇರಿದ್ದಾರೆ.  ಇದುವರೆಗೆ 34 ಜನರನ್ನು ಕೊಳದಿಂದ ತೆಗೆಯಲಾಗಿದೆ. ರಾಜ್ಯ ವಿಪತ್ತು ಪರಿಹಾರ ಪಡೆ(ಎಸ್‌ಡಿಆರ್‌ಎಫ್) ತಂಡವು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಾಯಾಳುಗಳನ್ನು ಇಟೌಂಜಾ ಸಿಎಚ್‌ಸಿಗೆ ದಾಖಲಿಸಲಾಗಿದೆ ಎಂದು ಲಖನೌ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್ ಅವರು ಹೇಳಿದ್ದಾರೆ.

ಪರಿಹಾರ ಘೋಷಣೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

SCROLL FOR NEXT