ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಮದ್ಯ ಉದ್ಯಮಿ ಸಮೀರ್ ಮಹೇಂದ್ರು ಬಂಧನ

Shilpa D

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಇಂಡೋಸ್ಪಿರಿಟ್ಸ್‌ ಮಾಲೀಕ ಸಮೀರ್ ಮಹೇಂದ್ರು ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಸಮೀರ್ ಮಹೇಂದ್ರು ಅವರನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದೆ. ಅಬಕಾರಿ ನೀತಿಗೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರ ವಿರುದ್ಧ ಈಗಾಗಲೇ ಸಿಬಿಐ ಪ್ರಕರಣ ದಾಖಲಿಸಿದೆ.

ಎಎಪಿಯ ಸಂವಹನ ಮುಖ್ಯಸ್ಥ ಹಾಗೂ  ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ವಿಜಯ್ ನಾಯರ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ ಒಂದು ದಿನದ ನಂತರ ಮದ್ಯವನ್ನು ವಿತರಿಸುವ ಇಂಡೋಸ್ಪಿರಿಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರು ಅವರ ಬಂಧನವಾಗಿದೆ.

ದೆಹಲಿಯ ಅಬಕಾರಿ ನೀತಿಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಶಿಫಾರಸು ಮಾಡಿದ್ದರು. ಪಂಜಾಬ್‌ ವಿಧಾನಸಭೆಗೆ ಈ ವರ್ಷ ನಡೆದ ಚುನಾವಣೆಯ ಖರ್ಚಿಗೆ ಹೊಸ ಅಬಕಾರಿ ನೀತಿಯಿಂದ ದೊರೆತ ಹಣವನ್ನು ಎಎಪಿ ಬಳಸಿದೆ ಎಂದು ಆ ಪಕ್ಷದ ವಿರೋಧಿಗಳು ಆರೋಪಿಸಿದ್ದಾರೆ.

SCROLL FOR NEXT