ದೇಶ

ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮುಳುಗಿ 50ಕ್ಕೂ ಹೆಚ್ಚು ಮಂದಿ ನಾಪತ್ತೆ

Lingaraj Badiger

ಗುವಾಹಟಿ/ಧುಬ್ರಿ: ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಬ್ರಹ್ಮಪುತ್ರ ನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಧುಬ್ರಿ-ಫುಲ್ಬರಿ ಸೇತುವೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಧುಬ್ರಿಯ ಹೆಚ್ಚುವರಿ ಉಪ ಆಯುಕ್ತ ಮನಶ್ ಕುಮಾರ್ ಸೈಕಿಯಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಪಿಲ್ಲರ್‌ಗೆ ದೋಣಿ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಘಟನೆಯ ನಂತರ, ಕನಿಷ್ಠ ಐದು ಜನರು ನದಿ ದಾಟಿ ಸುರಕ್ಷಿತವಾಗಿ ಬಂದಿದ್ದಾರೆ. ಆದರೆ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

"ದೋಣಿಯಲ್ಲಿ ಸುಮಾರು 50 ಜನರು ಇದ್ದರು ಎಂಬ ವರದಿಗಳಿವೆ. ಆದರೆ, ನಿಖರವಾದ ಸಂಖ್ಯೆಯ ಬಗ್ಗೆ ನಮಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ" ಎಂದು ಅವರು ತಿಳಿಸಿದ್ದಾರೆ.

ಧುಬ್ರಿ ವೃತ್ತದ ಅಧಿಕಾರಿ ಸಂಜು ದಾಸ್, ಭೂ ದಾಖಲೆ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿ ಸಹ ಈ ದೋಣಿಯಲ್ಲಿದ್ದರು ಎಂದು ತಿಳಿದುಬಂದಿದೆ. ಅವಘಡದ ನಂತರ ಅವರೆಲ್ಲರೂ ನಾಪತ್ತೆಯಾಗಿದ್ದಾರೆ.

ಜನರನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಯನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಇದುವರೆಗೆ ಸುಮಾರು 15 ಜನರನ್ನು ರಕ್ಷಿಸಲಾಗಿದೆ.

SCROLL FOR NEXT