ದೇಶ

ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಹಾನಿ: 5.2 ಕೋಟಿ ರೂ. ಠೇವಣಿ ಇಡುವಂತೆ ಪಿಎಫ್‌ಐಗೆ ಕೇರಳ ಹೈಕೋರ್ಟ್ ಆದೇಶ

Lingaraj Badiger

ಕೊಚ್ಚಿ: ಇತ್ತೀಚಿಗೆ ಎನ್ಐಎ ದಾಳಿ ಖಂಡಿಸಿದ ನಡೆಸಿದ ಪ್ರತಿಭಟನೆ ವೇಳೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ) ಆಸ್ತಿ ಸೇರಿದಂತೆ ಸಾರ್ವಜನಿಕ/ಖಾಸಗಿ ಆಸ್ತಿ ಹಾನಿ ಮಾಡಿದ ವೆಚ್ಚವನ್ನು ಭರಿಸಲು  5.2 ಕೋಟಿ ರೂಪಾಯಿ ಠೇವಣಿ ಇಡುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮತ್ತು ಅದರ ರಾಜ್ಯ ಪ್ರಧಾನ ಕಾರ್ಯದರ್ಶಿ ಎ ಅಬ್ದುಲ್ ಸತಾರ್ ಅವರಿಗೆ ಕೇರಳ ಹೈಕೋರ್ಟ್ ಆದೇಶಿಸಿದೆ.

ಪ್ರತಿಭಟನೆ ವೇಳೆ ಉಂಟಾದ ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದಂತೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 5.20 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ಹೈಕೋರ್ಟ್ ಪಿಎಫ್ಐಗೆ ಸೂಚಿಸಿದೆ.

"ಸೆಪ್ಟೆಂಬರ್ 23 ರಂದು ಕರೆ ನೀಡಲಾಗಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ವಿವಿಧ ಮ್ಯಾಜಿಸ್ಟ್ರೇಟ್/ ಸೆಷನ್ಸ್ ಕೋರ್ಟ್ ಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಅಬ್ದುಲ್ ಸತಾರ್ ರನ್ನು ಹೆಚ್ಚುವರಿ ಆರೋಪಿಯನ್ನಾಗಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ" ನ್ಯಾಯಾಲಯ ಸೂಚಿಸಿದೆ.

ಜಸ್ಟಿಸ್ ಎಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಸಿಪಿ ಮುಹಮ್ಮದ್ ನಿಯಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಎರಡು ವಾರಗಳಲ್ಲಿ ಈ ಮೊತ್ತವನ್ನು ಠೇವಣಿ ಮಾಡದಿದ್ದರೆ, ರಾಜ್ಯ ಕಂದಾಯ ವಸೂಲಾತಿ ಕಾಯ್ದೆಯ ನಿಬಂಧನೆಗಳ ಅಡಿ ಪಿಎಫ್‌ಐನ ಆಸ್ತಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹೇಳಿದೆ. 

ಸೆಪ್ಟೆಂಬರ್ 23 ರಂದು ಪಿಎಫ್ಐ ಸಂಘಟನೆ ಕೇರಳದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಕೆಎಸ್‌ಆರ್‌ಟಿಸಿ ಬಸ್​​ಗಳ ಮೇಲೆ ಕಲ್ಲುತೂರಾಟ ನಡೆದಿತ್ತು. 

SCROLL FOR NEXT