ದೇಶ

ಗುಜರಾತ್‌ನ ಎಎಪಿ ಸಹ ಉಸ್ತುವಾರಿ ರಾಘವ್ ಚಡ್ಡಾ ಬಂಧನಕ್ಕೆ ಸಂಚು ನಡೆದಿದೆ: ಅರವಿಂದ ಕೇಜ್ರಿವಾಲ್

Ramyashree GN

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಅವರನ್ನು ಗುಜರಾತ್‌ನಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಹ ಉಸ್ತುವಾರಿಯಾಗಿ ನೇಮಿಸಿದಾಗಿನಿಂದ ಅವರನ್ನು ಬಂಧಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಚಡ್ಡಾ ಅವರನ್ನು ಬಂಧಿಸುವ ಯೋಜನೆಯಲ್ಲಿ ಯಾವ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವ ಆರೋಪದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕೇಜ್ರಿವಾಲ್ ನಿರ್ದಿಷ್ಟಪಡಿಸಿಲ್ಲ.

ಆಮ್ ಆದ್ಮಿ ಪಕ್ಷದ ನಾಯಕರನ್ನು ಬಂಧಿಸುವ ಮೂಲಕ ಗುಜರಾತ್‌ನಲ್ಲಿ ತನಗಾಗುವ ಸೋಲನ್ನು ತಡೆಯಲು ಬಿಜೆಪಿ ಬಯಸಿದೆ. ಆದರೆ, ರಾಜ್ಯದ ಜನರು ಈ ಬಾರಿ ಕೇಜ್ರಿವಾಲ್‌ಗೆ ತಮ್ಮ ಜನಾದೇಶವನ್ನು ನೀಡಲು ಬಯಸಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

ಪಂಜಾಬ್‌ನ ರಾಜ್ಯಸಭಾ ಸಂಸದ ಚಡ್ಡಾ ಮಾತನಾಡಿ, 'ನಾನು ಜೈಲಿಗೆ ಹೋಗಲು ಅಥವಾ ಮರಣದಂಡನೆಯನ್ನು ಎದುರಿಸಲು ಹೆದರುವುದಿಲ್ಲ. ಗುಜರಾತ್‌ನಲ್ಲಿ ಎಎಪಿಗೆ ದೊರಕುತ್ತಿರುವ ಬೆಂಬಲವನ್ನು ನೋಡಿ ಬಿಜೆಪಿ ನಿದ್ರೆಯನ್ನೇ ಕಳೆದುಕೊಂಡಿದೆ. ನಾವು ಭಗತ್ ಸಿಂಗ್ ಅವರ ಅನುಯಾಯಿಗಳು, ನಿಮ್ಮ ಜೈಲಿನ ಗೋಡೆಗಳಿಗೆ ಅಥವಾ ನೇಣು ಕುಣಿಕೆಗೆ ಹೆದರುವುದಿಲ್ಲ' ಎಂದು ದೂರಿದರು.

ಈ ವರ್ಷದ ಆರಂಭದಲ್ಲಿ ಪಂಜಾಬ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಕೀರ್ತಿಗೆ ಪಾತ್ರರಾಗಿರುವ ಚಡ್ಡಾ ಅವರನ್ನು ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಇತ್ತೀಚೆಗೆ ಪಕ್ಷದ ರಾಜಕೀಯ ವ್ಯವಹಾರಗಳ ಸಹ-ಉಸ್ತುವಾರಿಯಾಗಿ ನೇಮಿಸಲಾಗಿದೆ.

'ರಾಘವ್ ಚಡ್ಡಾ ಅವರನ್ನು ಗುಜರಾತ್‌ನ ಸಹ ಉಸ್ತುವಾರಿಯಾಗಿ ನೇಮಿಸಿದ ನಂತರ ಮತ್ತು ಅವರು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗಿನಿಂದ ಈ ಜನರು (ಬಿಜೆಪಿ) ಅವರನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ನಾವು ಕೇಳುತ್ತಿದ್ದೇವೆ' ಎಂದು ಎಎಪಿಯ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ಯಾವ ಪ್ರಕರಣದಲ್ಲಿ ಅವರನ್ನ ಬಂಧಿಸಬೇಕು ಮತ್ತು ಅವರ ಮೇಲೆ ಮಾಡಬಹುದಾದಂತ ಆರೋಪಗಳೇನು ಎನ್ನುವ ಕುರಿತು ಈ ಜನರು ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಪಕ್ಷದ ಮಾಧ್ಯಮ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರನ್ನು ಸಿಬಿಐ ಮಂಗಳವಾರ ಬಂಧಿಸಿದ ನಂತರ ಕೇಜ್ರಿವಾಲ್ ಅವರ ಈ ಹೇಳಿಕೆ ಬಂದಿದೆ.

SCROLL FOR NEXT