ತಿರುವನಂತಪುರಂ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಅವರು ನಾಮಪತ್ರ ಸಲ್ಲಿಸಿದ್ದು, ಇದರೊಂದಿಗೆ ಕಾಲು ಶತಮಾನಕ್ಕೂ ಹೆಚ್ಚು ಸಮಯದ ನಂತರ ದಕ್ಷಿಣ ಭಾರತದವರೇ ಎಐಸಿಸಿ ಮುಖ್ಯಸ್ಥರಾಗುವುದು ಬಹುತೇಕ ಖಚಿತವಾಗಿದೆ.
1992 ರಿಂದ 1996 ರವರೆಗೆ ದಕ್ಷಿಣ ಭಾರತದಿಂದ ಪಿವಿ ನರಸಿಂಹ ರಾವ್ ಅವರು ಈ ಹುದ್ದೆಯನ್ನು ಅಲಂಕರಿಸಿದ್ದರು. ಈಗ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿ ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ತಿರುವನಂತಪುರಂ ಲೋಕಸಭಾ ಸದಸ್ಯ ಶಶಿ ತರೂರ್ ಅವರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಮೂರನೇ ಅಭ್ಯರ್ಥಿಯಾಗಿ ಜಾರ್ಖಂಡ್ ಮಾಜಿ ಸಚಿವ ಕೆ ಎನ್ ತ್ರಿಪಾಠಿ ಅವರು ಸಹ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಶಶಿ ತರೂರ್ ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನ ಭೀಷ್ಮ ಪಿತಾಮಹ. ಆದರೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಯಥಾಸ್ಥಿತಿ ಬೇಕೆಂದರೆ ನೀವು ಖರ್ಗೆಗೆ ಮತಹಾಕಿ, ಬದಲಾವಣೆ, ಪ್ರಗತಿ ಬೇಕು ಎನ್ನುವುದಾದರೆ ನನಗೆ ಮತ ನೀಡಿ ಎಂದು ಹೇಳಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ಅಧ್ಯಕ್ಷ ಗಾದಿಯತ್ತ ಮಲ್ಲಿಕಾರ್ಜುನ ಖರ್ಗೆ: ನಾಮಪತ್ರ ಸಲ್ಲಿಕೆ, ಜಿ-23 ನಾಯಕರು, ಗೆಹ್ಲೋಟ್ ಬೆಂಬಲ
ಇನ್ನು ಅನುಭವಿ ನಾಯಕ, ರಾಜ್ಯಸಭಾ ಪ್ರತಿಪಕ್ಷ ನಾಯಕ ಖರ್ಗೆ ಅವರು ನೆಹರು-ಗಾಂಧಿ ಕುಟುಂಬದ "ಅಧಿಕೃತ" ಅಭ್ಯರ್ಥಿಯಾಗಿರುವುದರಿಂದ ಅವರು ಸಹ ಕಣದಿಂದ ಹಿಂದೆ ಸರಿಯುವುದಿಲ್ಲ. ಅಂತಿಮವಾಗಿ ಕಾಂಗ್ರೆಸ್ ನ ಸುಮಾರು 9,100 ಮತದಾರರು ದಕ್ಷಿಣ ಭಾರತದ ಈ ಇಬ್ಬರಲ್ಲಿ ಒಬ್ಬರನ್ನು ತಮ್ಮ ಮುಖ್ಯಸ್ಥರನ್ನು ಆಯ್ಕೆ ಮಾಡಲಿದ್ದಾರೆ.