ದೇಶ

ದೇಶದಾದ್ಯಂತ ಕ್ರೈಸ್ತ ಮಿಷನರಿಗಳಿಗಿಂತ ಹಿಂದೂ ಸಂತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ: ಮೋಹನ್ ಭಾಗವತ್

Ramyashree GN

ಜೈಪುರ: ಆರ್‌ಎಸ್‌ಎಸ್‌ನ ಮೂರು ದಿನಗಳ ರಾಷ್ಟ್ರೀಯ ಸೇವಾ ಸಂಗಮ ಶುಕ್ರವಾರ ಜೈಪುರದಲ್ಲಿ ಆರಂಭವಾಗಿದ್ದು, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಉದ್ಘಾಟಿಸಿದರು. ಈ ವೇಳೆ ಮಾಡಿದ ಭಾಷಣದಲ್ಲಿ, ಹಿಂದೂ ಸಂತರು ಭಾರತೀಯ ಸಮಾಜಕ್ಕೆ ಒದಗಿಸಿದ ಸೇವೆಯು ಕ್ರೈಸ್ಥ ಮಿಷನರಿಗಳಿಗಿಂತ ಉತ್ತಮವಾಗಿದೆ ಎಂದು ಹೇಳಿದರು.

ಕ್ರೈಸ್ಥ ಮಿಷನರಿ ಶಾಲೆಗಳು ಮತ್ತು ಸಂಸ್ಥೆಗಳು ಜನರನ್ನು ಮತಾಂತರಗೊಳಿಸುವ ಪ್ರಯತ್ನಗಳಿಗಾಗಿ ಆರ್‌ಎಸ್‌ಎಸ್ ಆಗಾಗ್ಗೆ ಟೀಕಿಸುತ್ತಲೇ ಬಂದಿದೆ. 

ಮಿಷನರಿ ಸಮಾಜದ ಸದಸ್ಯರು ವಿಶ್ವದಾದ್ಯಂತ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಡೆಸುವ ಮೂಲಕ ಸೇವೆಗಳನ್ನು ಒದಗಿಸುತ್ತಿದ್ದಾರೆ. ಆದಾಗ್ಯೂ, ದೇಶದಾದ್ಯಂತ ಹಿಂದೂ ಸಂತರು ಮಾಡಿದ ಕೆಲಸವನ್ನು ಗಮನಿಸಿದರೆ, ಸಂತರು ಕ್ರೈಸ್ಥ ಮಿಷನರಿಗಳಿಗಿಂತಲೂ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

'ನಾವು ಸೇವೆಗಳ ಬಗ್ಗೆ ಮಾತನಾಡುವಾಗ, ಸಾಮಾನ್ಯ ಜನರು ಪ್ರಪಂಚದಾದ್ಯಂತ ಶಾಲೆಗಳು ಮತ್ತು ಅನೇಕ ಸಂಸ್ಥೆಗಳನ್ನು ನಡೆಸುವ ಮಿಷನರಿಗಳ ಹೆಸರನ್ನು ಉಲ್ಲೇಖಿಸುತ್ತಾರೆ. ಆದರೆ, ಹಿಂದೂ ಸಂತರು ಸಲ್ಲಿಸಿದ ಸೇವೆ ಕಡಿಮೆಯೇನಿಲ್ಲ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿರುವ ಸಂತರ ಸೇವೆಗಳು ಮಿಷನರಿಗಳ ಒಟ್ಟು ಸೇವೆಗಿಂತ ಅನೇಕ ಪಟ್ಟು ಹೆಚ್ಚಿದೆ ಎಂಬುದು ನನ್ನ ಗಮನಕ್ಕೆ ಬಂದಿತು' ಎಂದು ಅವರು ಹೇಳಿದರು.

'ಸೇವೆಗೆ ಯಾವುದೇ ಅಳತೆ ಇರಬಾರದು, ಇದು ಸ್ಪರ್ಧೆಯ ವಿಷಯವಲ್ಲ, ಇದು ಮನುಷ್ಯನ ಸಹಜ ಅಭಿವ್ಯಕ್ತಿಯಾಗಿದೆ. ಭಾರತವು ಬೆಳೆಯಬೇಕಾದರೆ ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ನಗುಮೊಗದಿಂದ ಸೇವೆ ಸಲ್ಲಿಸಲು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಜನರು ಸಂಘಕ್ಕೆ ಸೇವೆ ಸಲ್ಲಿಸಲು ಪ್ರಾರಂಭಿಸಿದಾಗ, ನಮ್ಮ ದೇಶದಲ್ಲಿ ಅನೇಕ ಜನರು ಅನೇಕ ರೀತಿಯ ಸೇವೆಗಳನ್ನು ಮಾಡುತ್ತಿದ್ದಾರೆ ಎಂಬುದು ತಿಳಿದುಬಂತು. ನಮ್ಮ ಸಮಾಜವು ನಿಜವಾದ ಮನುಷ್ಯರಿಂದ ಕೂಡಿದೆ. ಅವರಿಗೆ ಸಹಾನುಭೂತಿ ಮಾತ್ರವಲ್ಲ, ಅನುಕಂಪ ಇದೆ. ಸಮಾಜದ ನಾಲ್ಕು ಕಾಲುಗಳಲ್ಲಿ ಸಹಾನುಭೂತಿಯೂ ಒಂದು' ಎಂದು ಭಾಗವತ್ ಹೇಳಿದರು.

ಸಂಘ ಆರಂಭದಿಂದಲೂ ಸಮಾಜ ಸೇವೆ ಮಾಡುತ್ತಾ ಬಂದಿದ್ದು, ಪ್ರತಿಯೊಬ್ಬರಲ್ಲೂ ಸೇವಾ ಸಾಮರ್ಥ್ಯವಿದ್ದು, ಅದನ್ನು ಜಾಗೃತಗೊಳಿಸಬೇಕಿದೆ. ಸಂಘವು ಸದ್ಯ ಸೇವೆಯ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿದೆ. ಎಲ್ಲರನ್ನು ಸಮಾನವಾಗಿ ಪರಿಗಣಿಸುವ ಮತ್ತು ಸಮಾಜದಲ್ಲಿ ದುರ್ಬಲ ವ್ಯಕ್ತಿಗಳಿಗೆ ಶಕ್ತಿ ಒದಗಿಸುವ ಮಹತ್ವವನ್ನು ಭಾಗವತ್ ಒತ್ತಿ ಹೇಳಿದರು.

SCROLL FOR NEXT