ದೇಶ

ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ 15-20 ದಿನಗಳಲ್ಲಿ ಪತನವಾಗಲಿದೆ: ಸಂಜಯ್ ರಾವುತ್

Ramyashree GN

ಜಲಗಾಂವ್: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ 'ಡೆತ್ ವಾರಂಟ್' ಹೊರಡಿಸಲಾಗಿದ್ದು, ಮುಂದಿನ 15-20 ದಿನಗಳಲ್ಲಿ ಅದು ಪತನವಾಗಲಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.

ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದ 16 ಶಿವಸೇನೆಯ (ಶಿಂಧೆ ಪಕ್ಷದ) ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳು ಬಾಕಿ ಉಳಿದಿರುವ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ರಾಜ್ಯಸಭಾ ಸದಸ್ಯರು ಉಲ್ಲೇಖಿಸಿದರು.

ಈಗಿರುವ ಮುಖ್ಯಮಂತ್ರಿ ಮತ್ತು ಅವರ 40 ಶಾಸಕರ ಸರ್ಕಾರ 15-20 ದಿನಗಳಲ್ಲಿ ಪತನವಾಗಲಿದೆ. ಈ ಸರ್ಕಾರದ ಡೆತ್ ವಾರಂಟ್ ಹೊರಡಿಸಲಾಗಿದೆ. ಇದಕ್ಕೆ ಯಾರು ಸಹಿ ಹಾಕುತ್ತಾರೆ ಎಂಬುದು ಈಗ ನಿರ್ಧಾರವಾಗಲಿದೆ ಎಂದು ರಾವುತ್ ಹೇಳಿದ್ದಾರೆ.

ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಈ ಹಿಂದೆ ಫೆಬ್ರುವರಿಯಲ್ಲಿಯೂ ಹೇಳಿಕೊಂಡಿದ್ದರು.
ಕಳೆದ ವರ್ಷ ಜೂನ್‌ನಲ್ಲಿ, ಶಿಂಧೆ ಮತ್ತು 39 ಶಾಸಕರು ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯವೆದ್ದರು. ಇದರ ಪರಿಣಾಮವಾಗಿ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ (ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡ) ಪತನಗೊಂಡಿತು ಮತ್ತು ಶಿವಸೇನೆ ಪಕ್ಷ ವಿಭಜನೆಯಾಯಿತು.

ಶಿಂಧೆ ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಮೈತ್ರಿ ಮಾಡಿಕೊಂಡರು. 2022ರ ಜೂನ್ 30ರಂದು ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣದ ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಕಾಯ್ದಿರಿಸಿತ್ತು.

SCROLL FOR NEXT