ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿದಂತೆ ನಾಲ್ವರ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

Nagaraja AB

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ನಾಲ್ವರ ವಿರುದ್ಧ ಸಿಬಿಐ ಮಂಗಳವಾರ ಚಾರ್ಜ್ ಶೀಟ್ ಸಲ್ಲಿಸಿದೆ. ಕಳೆದ ವರ್ಷ ಜುಲೈ 31 ರಂದು ಅಬಕಾರಿ ನೀತಿ ರದ್ದುಪಡಿಸಿದ ನಂತರ ದೆಹಲಿ ಸರ್ಕಾರಕ್ಕೆ ರೂ. 2,873 ಕೋಟಿ ನಷ್ಟ ಉಂಟುಮಾಡಿದ ಹಗರಣಕ್ಕೆ ಸಂಬಂಧಿಸಿದ ಆರೋಪ ಇದಾಗಿದೆ. 

ವಿಶೇಷ ನ್ಯಾಯಾಧೀಶ ಎಂಕೆ ನಾಗಪಾಲ್ ಅವರ ನ್ಯಾಯಾಲಯದಲ್ಲಿ  ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಸಿಸೋಡಿಯಾ ಅವರೊಂದಿಗೆ ಅರ್ಜುನ್ ಪಾಂಡೆ, ಬ್ರಿಂಡ್ಕೊ ಸ್ಪಿರಿಟ್ಸ್ ಮಾಲೀಕ ಅಮನದೀಪ್ ಧಾಲ್ ಮತ್ತು ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ಹೆಸರಿಸಿದೆ.

ಬುಚ್ಚಿ ಬಾಬು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಮತ್ತು ಇವರು ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ ಎಂಎಲ್‌ಸಿ ಕೆ ಕವಿತಾ ಅವರ ಮಾಜಿ ಆಡಿಟರ್ ಎಂದು ಹೇಳಲಾಗಿದೆ.

ಎಎಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮತ್ತು ಮದ್ಯದ ವ್ಯಾಪಾರಿಗಳಿಂದ ಅಕ್ರಮ ಹಣ ನಿರ್ವಹಣೆ ಮತ್ತು  ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದ ಸಹ-ಆರೋಪಿಯಾಗಿರುವ ಮಾಹಿತಿದಾರ ದಿನೇಶ್ ಅರೋರಾ ಜೊತೆಗೆ ಅರ್ಜುನ್ ಪಾಂಡೆ ಅವರ ಹೆಸರು ತನಿಖೆಯ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ಮದ್ಯ ಹಗರಣದಲ್ಲಿ ಸೌತ್ ಗ್ರೂಪ್ ಪ್ರತಿನಿಧಿಸುವ ಮೂಲಕ ಬುಚ್ಚಿ ಬಾಬು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಈ ಪ್ರಕರಣದಲ್ಲಿ  ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಜೊತೆಗೆ ಐಪಿಸಿ ಸೆಕ್ಷನ್ 120-ಬಿ (ಅಪರಾಧದ ಪಿತೂರಿ) 201 ಮತ್ತು 420 ನ್ನು ಸಿಬಿಐ ಉಲ್ಲೇಖಿಸಿದೆ. ಪ್ರಕರಣದಲ್ಲಿ ದೊಡ್ಡ ಪಿತೂರಿ ಮತ್ತು ಇತರ ಆರೋಪಿಗಳ ಪಾತ್ರವನ್ನು ತನಿಖೆಯಲ್ಲಿ ತೆರೆದಿಡಲಾಗಿದೆ ಎಂದು ಸಿಬಿಐ ವಿಶೇಷ  ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ತನಿಖಾ ಸಂಸ್ಥೆ ತಿಳಿಸಿದೆ. 

ನವೆಂಬರ್ 25, 2022 ರಂದು ಸಿಬಿಐ ಕೊನೆಯ ಚಾರ್ಜ್ ಶೀಟ್ ಸಲ್ಲಿಸಿತ್ತು. ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22 ರ ಅಬಕಾರಿ ನೀತಿಯು ಕೆಲವು ಡೀಲರ್‌ಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ. "ಅಬಕಾರಿ ನೀತಿಯಲ್ಲಿ ಮಾರ್ಪಾಡುಗಳು, ಪರವಾನಗಿದಾರರಿಗೆ ಅನಪೇಕ್ಷಿತ ಅನುಕೂಲಗಳನ್ನು ವಿಸ್ತರಿಸುವುದು, ಪರವಾನಗಿ ಶುಲ್ಕದಲ್ಲಿ ಮನ್ನಾ, ಅನುಮೋದನೆಯಿಲ್ಲದೆ ಎಲ್ -1 ಪರವಾನಗಿ ವಿಸ್ತರಣೆ ಇತ್ಯಾದಿ ಸೇರಿದಂತೆ ಅಕ್ರಮಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
 

SCROLL FOR NEXT