ಇಸ್ರೋ ಚಂದ್ರಯಾನ ನೌಕೆ 
ದೇಶ

Chandrayaan-3: ಚಂದ್ರನ ಅಂತಿಮ ಕಕ್ಷೆ ತಲುಪಿದ ಇಸ್ರೋ ನೌಕೆ, ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ಹೌದು.. ಇಸ್ರೋದ ಚಂದ್ರಯಾನ-3 ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಆ ಮೂಲಕ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ. ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದ್ದು, ಚಂದ್ರನ ಕಕ್ಷೆಗೆ ಅಂತಿಮ ಪರಿಚಲನೆಯು ಪೂರ್ಣಗೊಂಡಿದೆ (153 km x 163 km) ಎಂದು ಹೇಳಿದೆ.

ಈಗ ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ (ಉಡ್ಡಯನ ವಾಹಕ) ಪ್ರತ್ಯೇಕಿಸುವ ಸಮಯ. ಇದಕ್ಕೆ ಆಗಸ್ಟ್ 17ರಂದು ಮುಹೂರ್ತ ನಿಗದಿಯಾಗಿದೆ. ಆ ಮೂಲಕ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ ಎಂದು ತಿಳಿಸಿದೆ.

ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆ ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ ಮೂರು ಕಕ್ಷೆ ಪರಿಚಲನೆ ಮೂಲಕ (ಆಗಸ್ಟ್ 6, 9 ಹಾಗೂ 14) ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿದೆ. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜಿಸಲಾಗಿದೆ. 

ಇಸ್ರೋ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಈವರೆಗೂ ಯೋಜನೆಯಂತೆಯೇ ಚಂದ್ರಯಾನ-3 ನೌಕೆ ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದ್ದು, ಆದರೆ ಈ ಮಿಷನ್​ ಪೂರ್ಣಗೊಳ್ಳಬೇಕಾದರೆ, ಚಂದ್ರನ ಮೇಲೆ ಮೃದುವಾಗಿ ಲ್ಯಾಂಡ್​ ಆಗಬೇಕಿರುವುದು ತುಂಬಾ ಮುಖ್ಯ. ಈ ತಿಂಗಳ 23ರಂದು ಸಾಫ್ಟ್​ ಲ್ಯಾಂಡಿಂಗ್​ಗೆ ಪ್ರಯತ್ನ ಮಾಡುತ್ತೇವೆ ಎಂದು ಇಸ್ರೋ ತಿಳಿಸಿದೆ.

163 ಕಿ.ಮೀ ದೂರವಷ್ಟೇ
ಆಗಸ್ಟ್​ 15ರ ಮಂಗಳವಾರ ಬಾಹ್ಯಾಕಾಶ ನೌಕೆ ಮಹತ್ವದ ಫೈರಿಂಗ್​ ಆಪರೇಷನ್​ ಅನ್ನು ಯಶಸ್ವಿಯಾಗಿ ಮುಗಿಸಿದ್ದು, ನೌಕೆಯನ್ನು ಚಂದ್ರನ ಸುತ್ತ 153 ಕಿ.ಮೀ. x 163 ಕಿ.ಮೀ. ಕಕ್ಷೆಯಲ್ಲಿ ಇರಿಸಿದೆ. ಇದು ಅಂತಿಮಘಟ್ಟವಾಗಿದ್ದು, ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೊಂದು ಹೆಜ್ಜೆ ಬಾಕಿ ಇದೆ. ಆಗಸ್ಟ್​ 1ರಂದು ಭೂಕಕ್ಷೆಯನ್ನು ತೊರೆದ ಚಂದ್ರಯಾನ ನೌಕೆ, ಆಗಸ್ಟ್​ 5ರಂದು ಚಂದ್ರನ ಕಕ್ಷೆಗೆ ಪ್ರವೇಶ ಪಡೆಯಿತು. ಅಂದಿನಿಂದ ಇಸ್ರೋ ಆರ್ಬಿಟ್​ ರಿಡಕ್ಷನ್​ ಮಾನ್ಯುವರ್ಸ್​ ಮಾಡುತ್ತಿದ್ದು, ನೌಕೆಯ ಅಂತರವನ್ನು ಕಡಿತಗೊಳಿಸುತ್ತಿದೆ. ಇತ್ತೀಚೆಗಷ್ಟೇ ಮತ್ತೊಂದು ಹಂತದ ರಿಡಕ್ಷನ್​ ಮಾನ್ಯುವರ್ಸ್​ ಅನ್ನು ಯಶಸ್ವಿಯಾಗಿ ಮುಗಿಸಿತು. ಆಗಸ್ಟ್​ 15ರಂದು ಮತ್ತೊಂದು ಹಂತದ ಪ್ರಕ್ರಿಯೆಯು ಮುಗಿಸಿದ್ದು, ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೂ 163 ಕಿ.ಮೀ. ದೂರ ಮಾತ್ರ ಬಾಕಿ ಇದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ನಾಳೆ ಲ್ಯಾಂಡರ್​ ಬೇರ್ಪಡೆ
ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಬಾಹ್ಯಾಕಾಶ ನೌಕೆಯು ಪ್ರೊಪಲ್ಸನ್​ ಮಾಡ್ಯೂಲ್​ ಮತ್ತು ಒಂದು ಲ್ಯಾಂಡರ್​ ಮಾಡ್ಯೂಲ್​ ಒಳಗೊಂಡಿದೆ. ತನ್ನ ಪ್ರಯಾಣದ ಮಹತ್ವದ ಘಟ್ಟಕ್ಕಾಗಿ ಇದೀಗ ನೌಕೆಯು ಸಿದ್ಧತೆ ನಡೆಸುತ್ತಿದೆ. ಆಗಸ್ಟ್​ 17ರಂದು ಲ್ಯಾಂಡರ್​ ಮಾಡ್ಯೂಲ್​ ಅನ್ನು ಪ್ರೊಪಲ್ಸನ್​ ಮಾಡ್ಯೂಲ್​ನಿಂದ ಬೇರ್ಪಡಿಸಲು ಸಮಯ ನಿಗದಿಯಾಗಿದೆ.

ಪ್ರೊಪಲ್ಸನ್​ ಮಾಡ್ಯೂಲ್​ನಲ್ಲಿ ಏನಿದೆ?
ಪ್ರೊಪಲ್ಸನ್​ ಮಾಡ್ಯೂಲ್​ ಪೆಟ್ಟಿಗೆಯಂತಹ ರಚನೆಯಾಗಿದ್ದು, ದೊಡ್ಡ ಸೌರ ಫಲಕ ಮತ್ತು ಅದರ ಮೇಲೆ ಒಂದು ಸಿಲಿಂಡರ್ ಇದೆ. ಬಾಹ್ಯಾಕಾಶ ನೌಕೆಯು 100 ಕಿಮೀ ಚಂದ್ರನ ಕಕ್ಷೆಯನ್ನು ತಲುಪುವವರೆಗೆ ಲ್ಯಾಂಡರ್ ಮತ್ತು ರೋವರ್ ಸಂರಚನೆಯನ್ನು ಸಾಗಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. ಲ್ಯಾಂಡರ್​ನಿಂದ ಬೇರ್ಪಟ್ಟ ಬಳಿಕವೂ ಪ್ರೊಪಲ್ಸನ್​ ಮಾಡ್ಯೂಲ್​, ಸಂವಹನ ಉಪಗ್ರಹವಾಗಿ ಕೆಲಸ ಮಾಡಲಿದೆ.

ಲ್ಯಾಂಡರ್​ ಮಾಡ್ಯೂಲ್​ನಲ್ಲಿ ಏನಿದೆ?
ಇದೇ ಸಂದರ್ಭದಲ್ಲಿ ವಿಕ್ರಮ್​ ಹೆಸರಿನ ಲ್ಯಾಂಡರ್​ ಮಾಡ್ಯೂಲ್​, ಚಂದ್ರನ ಮೇಲ್ಮೈ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ನಾಲ್ಕು ಲ್ಯಾಂಡಿಂಗ್​ ಲೆಗ್ಸ್​, ತಲಾ 800 ನ್ಯೂಟನ್‌ಗಳ ನಾಲ್ಕು ಲ್ಯಾಂಡಿಂಗ್ ಥ್ರಸ್ಟರ್‌ಗಳನ್ನು ವಿಕ್ರಮ್​ ಲ್ಯಾಂಡರ್​ ಹೊಂದಿದ್ದು, ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವ ರೀತಿಯಲ್ಲಿ ಲ್ಯಾಂಡರ್​ ಅನ್ನು ಸಿದ್ಧಪಡಿಸಲಾಗಿದೆ. ವಿಕ್ರಮ್​ ಲ್ಯಾಂಡರ್​ ತನ್ನೊಳಗೆ ಪ್ರಗ್ಯಾನ್ ಹೆಸರಿನ ರೋವರ್ ಅನ್ನು ಹೊತ್ತೊಯ್ದಿದ್ದು, ಯಶಸ್ವಿ ಲ್ಯಾಂಡಿಂಗ್ ಆದ ನಂತರ ಅದನ್ನು ಚಂದ್ರನ ಮೇಲೆ ನಿಯೋಜಿಸಲಾಗುತ್ತದೆ.

ಚಂದ್ರಯಾನ-2 ಮಿಷನ್​ ಲ್ಯಾಂಡಿಂಗ್​ ವೇಳೆಯೇ ವಿಫಲವಾಗಿತು. ಲ್ಯಾಂಡರ್​ ಇನ್ನೇನು ಚಂದ್ರನ ಮೇಲೆ ಇಳಿಯಬೇಕು ಅನ್ನುವಷ್ಟರಲ್ಲಿ ಪತನಗೊಂಡು ಸಂಪರ್ಕ ಕಡಿದುಕೊಂಡಿತು. ಇದರಿಂದ ಚಂದ್ರಯಾನ-2 ಯೋಜನೆ ವಿಫಲವಾಯಿತು. ಇದರಿಂದ ಪಾಠ ಕಲಿತಿರುವ ಇಸ್ರೋ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಾರಿ ಯಾವುದೇ ತೊಂದರೆ ಇರುವುದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದೆ. ನಿರ್ಣಾಯಕ ಹಂತದಲ್ಲೂ ನೌಕೆಯ ಸೆನ್ಸಾರ್​ ಮತ್ತು ಇಂಜಿನ್​ ವಿಫಲವಾದರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಲ್ಯಾಂಡಿಂಗ್ ಯಶಸ್ವಿಯಾಗುವ ರೀತಿಯಲ್ಲಿ ಹೊಸ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.

ಒಂದು ವೇಳೆ ಚಂದ್ರನ ಮೇಲೆ ಭಾರತ ಸಾಫ್ಟ್​ ಲ್ಯಾಂಡ್​ ಮಾಡಿದ್ದಲ್ಲಿ, ಅಮೆರಿಕ, ಚೀನಾ, ರಷ್ಯಾ ಮತ್ತು ಫ್ರಾನ್ಸ್​ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT