ವಾರಾಣಸಿ: ಚಂದ್ರಯಾನ-3 ಲ್ಯಾಂಡರ್ ತನ್ನ ಗಮ್ಯಸ್ಥಾನವನ್ನು ತಲುಪುತ್ತಿದ್ದಂತೆ, ಭಾರತದ ಮೂರನೇ ಚಂದ್ರಯಾನ ಕಾರ್ಯಾಚರಣೆಯ ಯಶಸ್ಸಿಗಾಗಿ ದೇಶದ ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಸಲಾಗುತ್ತಿದೆ.
ಉತ್ತರ ಪ್ರದೇಶದ ವಾರಣಾಸಿಯ ಕಾಮಾಕ್ಯ ದೇವಾಲಯದಲ್ಲಿ 'ಹವನ' ನಡೆಸಲಾಯಿತು.
ಮುಂಬೈನ ಚಂದ್ರಮೌಳೇಶ್ವರ ಶಿವ ಮಂದಿರದಲ್ಲಿ ಶಿವಸೇನಾ ಉದ್ದವ್ ಠಾಕ್ರೆ ಬಣದ ನಾಯಕ ಆನಂದ್ ದುಬೆ ಅವರು ಚಂದ್ರಯಾನ-3 ರ ಯಶಸ್ಸಿಗಾಗಿ ವಿಶೇಷ ಪೂಜೆ ಆಯೋಜಿಸಿದರು.
ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿಯ ಗಣೇಶ ದೇವಾಲಯದಲ್ಲಿ ಚಂದ್ರಯಾನ-3ರ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಭಾರತದ ಮಹತ್ವಕಾಂಕ್ಷೆಯ ಯೋಜನೆ ಯಶಸ್ಸು ಸಾಧಿಸಲಿ ಎಂದು ಪ್ರಾರ್ಥಿಸಲಾಯಿತು.
ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಆಗಸ್ಟ್ 23 ರಂದು ಸಂಜೆ 6.04 ರ ಸುಮಾರಿಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ಭಾನುವಾರ ತಿಳಿಸಿದೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯಲಿದೆ.
ಇದನ್ನೂ ಓದಿ: ಚಂದ್ರಯಾನ-3 ಆಗಸ್ಟ್ 23ರಂದು ಲ್ಯಾಂಡಿಂಗ್ ಆಗದಿದ್ದರೆ ಮತ್ತೆ ಆಗಸ್ಟ್ 27ರಂದು ಪ್ರಯತ್ನಿಸುತ್ತೇವೆ: ಇಸ್ರೋ ವಿಜ್ಞಾನಿ
ಚಂದ್ರಯಾನ-3 ಚಂದ್ರಯಾನ-2 ರ ಮುಂದುವರೆದ ಕಾರ್ಯಾಚರಣೆ ಆಗಿದ್ದು, ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ರೋವಿಂಗ್ ಅಂತ್ಯದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಒಳಗೊಂಡಿರುವ ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು 2019 ರಲ್ಲಿ ಉಡಾವಣೆ ಮಾಡಲಾಗಿತ್ತು. ರೋವರ್ ಹೊಂದಿರುವ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಅಪ್ಪಳಿಸಿತ್ತು. ಆದರೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸುವ ತನ್ನ ಕಾರ್ಯಾಚರಣೆಯಲ್ಲಿ ವಿಫಲವಾಗಿತ್ತು.