ದೇಶ

ತೆಲಂಗಾಣ: ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಿದ ಬಿಆರ್‌ಎಸ್‌ ನಾಯಕ ಕೆಟಿಆರ್‌; ಪಕ್ಷದ ಸೋಲಿನ ಬಗ್ಗೆ ಹೇಳಿದ್ದೇನು?

Ramyashree GN

ಹೈದರಾಬಾದ್: ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ನಾಯಕ ಕೆಟಿ ರಾಮರಾವ್ ಅವರು ನಿರಾಸೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷವನ್ನು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಿಆರ್‌ಎಸ್ ಪಕ್ಷಕ್ಕೆ ಸತತ ಎರಡು ಬಾರಿ ಅಧಿಕಾರ ನಡೆಸಲು ಅವಕಾಶ ನೀಡಿದ್ದಕ್ಕಾಗಿ ತೆಲಂಗಾಣ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂದಿನ ಫಲಿತಾಂಶದ ಬಗ್ಗೆ ಬೇಸರವಾಗಿಲ್ಲ, ಆದರೆ ಇದು ನಮಗೆ ನಿರೀಕ್ಷಿತವಾಗಿರುವುದರಿಂದ ಖಂಡಿತವಾಗಿಯೂ ನಿರಾಸೆಯಾಗಿದೆ. ಆದರೆ, ನಾವು ಇದನ್ನು ಎಚ್ಚರಿಕೆಯ ಹೆಜ್ಜೆಯನ್ನಾಗಿ ಪರಿಗಣಿಸುತ್ತೇವೆ ಮತ್ತು ಮತ್ತೆ ಪುಟಿದೇಳುತ್ತೇವೆ. ಜನಾದೇಶ ಪಡೆದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ನಿಮಗೆ ಶುಭವಾಗಲಿ' ಎಂದಿದ್ದಾರೆ.

'ಹ್ಯಾಟ್ರಿಕ್ ಲೋಡ್ ಆಗುತ್ತಿದೆ. 3.0ಗೆ ಸಂಭ್ರಮಾಚರಿಸಲು ಸಿದ್ಧರಾಗಿ' ಎಂದು ತಾವೇ ಮಾಡಿದ್ದ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಅವರು, ನಾವು ನಿರೀಕ್ಷಿಸಿದ್ದು ಹುಸಿಯಾಗಿದೆ. ಇದು ತಪ್ಪು ಲೆಕ್ಕಾಚಾರವಾಗಿದೆ ಎಂದು ಬರೆದಿದ್ದಾರೆ. 

ಇಸಿಐನ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 119 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಆರ್‌ಎಸ್ 40, ಬಿಜೆಪಿ 9, ಎಐಎಂಐಎಂ 6 ಮತ್ತು ಸಿಪಿಐ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸುತ್ತಿದೆ ಎಂಬುದು ಸ್ಪಷ್ಟವಾದ ನಂತರ ಹೈದರಾಬಾದ್‌ನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಪರವಾಗಿ 'ಸಿಎಂ-ಸಿಎಂ' ಎಂದು ಘೋಷಣೆಗಳನ್ನು ಕೂಗಿದರು.

ರೇವಂತ್ ರೆಡ್ಡಿ ಅವರು ರೋಡ್‌ಶೋ ಆರಂಭಿಸುತ್ತಿದ್ದಂತೆಯೇ ನೆರೆದಿದ್ದ ಅಪಾರ ಜನಸ್ತೋಮ ಪಕ್ಷದ ಧ್ವಜವನ್ನು ಬೀಸುತ್ತಾ ಅವರನ್ನು ಹುರಿದುಂಬಿಸಿದರು.

SCROLL FOR NEXT