ನವದೆಹಲಿ: 2001ರ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಗುರುತಿಸುವ ದಿನವಾದ ಡಿಸೆಂಬರ್ 13ರಂದು 'ಸಂಸತ್ತಿನ ಅಡಿಪಾಯವನ್ನು ಬುಡಮೇಲು ಮಾಡುವುದಾಗಿ' ಬೆದರಿಕೆಯೊಡ್ಡುವ ವಿಡಿಯೋ ಸಂದೇಶವನ್ನು ಯುಎಸ್ ಮೂಲದ ಖಲಿಸ್ತಾನಿ ಬೆಂಬಲಿಗ ಗುರುಪತ್ವಂತ್ ಸಿಂಗ್ ಪನ್ನು ಬಿಡುಗಡೆ ಮಾಡಿದ್ದು, ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಸಂಸತ್ತಿನ ಸುತ್ತಮುತ್ತ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ. ಬೆದರಿಕೆ ಹಿನ್ನೆಲೆಯಲ್ಲಿ ಇಡೀ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ.
'ಡಿಸೆಂಬರ್ 4ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ನಾವು ಜಾಗರೂಕರಾಗಿರುತ್ತೇವೆ. ಯಾವುದೇ ಅಹಿತಕರ ಘಟನೆಯನ್ನು ತಡೆಯಲು ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ' ಎಂದು ಅಧಿಕಾರಿ ಹೇಳಿದರು.
2001ರ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿನ ಫೊಟೋದ ಪಕ್ಕದಲ್ಲಿ ನಿಂತು ಮಾಡಿರುವ ವಿಡಿಯೋದಲ್ಲಿ, ನಿಷೇಧಿತ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ, ನರೇಂದ್ರ ಮೋದಿ ಸರ್ಕಾರವು ತನ್ನನ್ನು ಕೊಲ್ಲಲು ಪ್ರಯತ್ನಿಸಿದೆ ಮತ್ತು ಡಿಸೆಂಬರ್ 13ರಂದು ಇದಕ್ಕೆ ಪ್ರತಿಕ್ರಿಯಿಸುವುದಾಗಿ ಬೆದರಿಕೆ ಹಾಕಿದ್ದಾನೆ' ಎಂದು ಹೇಳಿದ್ದಾರೆ.
'ಭಾರತದ ಸಂಸತ್ತಿನ ಅಡಿಪಾಯವನ್ನು ಅಲುಗಾಡಿಸುತ್ತೇನೆ' ಎಂದು ಗುರುಪತ್ವಂತ್ ಸಿಂಗ್ ಬೆದರಿಕೆಯೊಡ್ಡಿದ್ದಾನೆ.