ದೇಶ

ಸಂಸತ್ ಭದ್ರತಾ ಲೋಪ: ಎಲ್ಲಾ ಆರು ಆರೋಪಿಗಳನ್ನು ಒಟ್ಟಿಗೆ ಕರೆತಂದ ಪೊಲೀಸರು

Nagaraja AB

ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳು ಘಟನೆಗೂ ಮುನ್ನಾ ಪರಸ್ಪರ ಹೇಳಿಕೊಂಡಿದ್ದ ಹೇಳಿಕೆಗಳು ಹೊಂದಿಕೆಯಾಗಿತ್ತೆ ಎಂಬುದನ್ನು ಪರಿಶೀಲಿಸಲು ಎಲ್ಲಾ ಆರು ಆರೋಪಿಗಳನ್ನು ದೆಹಲಿ ಪೊಲೀಸರು ಒಟ್ಟಿಗೆ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, ಎಲ್ಲಾ ಆರು ಜನರನ್ನು ವಿಶೇಷ ಸೆಲ್‌ನ ಐದು ವಿಭಿನ್ನ ಘಟಕಗಳಲ್ಲಿ ಇರಿಸಲಾಗಿದ್ದು,  ಅಲ್ಲಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.ಇದಕ್ಕೂ ಮುನ್ನ ಬುಧವಾರ ಆರೋಪಿಗಳನ್ನು ಕೌಂಟರ್ ಇಂಟಲಿಜೆನ್ಸ್  ಘಟಕಕ್ಕೆ ಹಸ್ತಾಂತರಿಸಲಾಗಿತ್ತು. ಅಲ್ಲಿ ತೀವ್ರ ವಿಚಾರಣೆ ನಡೆಸಲಾಗಿದೆ. 

ಈ ಮಧ್ಯೆ ನಾಲ್ವರು ಆರೋಪಿಗಳಾದ ಮನೋರಂಜನ್, ಅಮೋಲ್, ಸಾಗರ್ ಮತ್ತು ನೀಲಂ ಅವರ ಏಳು ದಿನಗಳ ಕಸ್ಟಡಿ ಗುರುವಾರಕ್ಕೆ ಮುಕ್ತಾಯವಾಗಲಿದೆ. 2001 ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ 22 ನೇ ವಾರ್ಷಿಕೋತ್ಸವದಂದು ನಡೆದಿದ್ದ ಸಂಸತ್ ಭದ್ರತಾ ಲೋಪ ದೇಶಾದ್ಯಂತ ಆಘಾತವನ್ನು ಉಂಟುಮಾಡಿತ್ತು. 

ಘಟನೆಯ ಕುರಿತು ತನಿಖೆ ತೀವ್ರಗೊಂಡಿದ್ದು, ಭದ್ರತಾ ಉಲ್ಲಂಘನೆಯ ಆರೋಪಿಗಳು ತಮ್ಮ ಯೋಜನೆಗಾಗಿ 7-8 ಸದಸ್ಯರೊಂದಿಗೆ ವಾಟ್ಸಾಪ್ ಗುಂಪನ್ನು ರಚಿಸಿಕೊಂಡಿದ್ದರು. ಆರೋಪಿಗಳು ಬಹು ಹಂತದ ಭದ್ರತೆಯನ್ನು ಉಲ್ಲಂಘಿಸಿ ಸಂಸತ್ ಭವನ ಪ್ರವೇಶಿಸುವ  ಪಿತೂರಿಯನ್ನು ಈ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಗುಂಪಿನ ಭಾಗವಾಗಿರುವ ಎಲ್ಲ ವ್ಯಕ್ತಿಗಳೊಂದಿಗೆ ವಿಶೇಷ ಸೆಲ್ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ನಾಶಪಡಿಸಿದ ಸಿಮ್ ಕಾರ್ಡ್ ಅನ್ನು ಮರು ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅವರು ಬಳಸಿದ ಇಮೇಲ್ ಅನ್ನು ಪ್ರವೇಶಿಸಬಹುದು. ಇದಕ್ಕಾಗಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ ನೆರವು ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ತೊಡಗಿರುವ ಸುಳಿವು ಸಿಕ್ಕಿದ್ದು, ಅವರಿಗಾಗಿ ಲಖನೌ, ಮೈಸೂರು, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಆರೋಪಿಗಳ ಸಂಪರ್ಕವಿರುವ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿದ್ದಾರೆ. 

SCROLL FOR NEXT